ತಿ.ನರಸೀಪುರ ತಾಲ್ಲೂಕಿನ ಬನ್ನೂರು ಠಾಣಾ ವ್ಯಾಪ್ತಿಯ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಪುಟ್ಟಸ್ವಾಮಿ ಎಂಬುವವರ ಪತ್ನಿ ಮಹದೇವಿ (45) ಎಂಬುವವರನ್ನು ಆಗಸ್ಟ್ 18ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಗ್ರಾಮದ ಹೊರವಲಯದ ತೋಪಿನಲ್ಲಿ ಚಿನ್ನಾಭರಣ ದೋಚುವ ಉದ್ದೇಶದಿಂದ ಹೊಂಚು ಹಾಕಿ, ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕತ್ತು ಬಿಗಿದು ಈ ಕೃತ್ಯ ಎಸಗಿದ್ದರು. ಮಹಿಳೆಯ ಕಿವಿ ಓಲೆ, ಮಾಂಗಲ್ಯ ಕರಿಮಣಿ ಸರ ತೆಗೆದುಕೊಂಡು ಪರಾರಿಯಾಗಿದ್ದರು. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಡಿವೈಎಸ್ಪಿ ಪ್ರಭಾಕರ್ ಸಿಂಧೆ ಮಾರ್ಗದರ್ಶನದಲ್ಲಿ ಮತ್ತು ತಿ.ನರಸೀಪುರ ಸಿಪಿಐ ಲವ ನೇತೃತ್ವದಲ್ಲಿ ತಂಡ ರಚಿಸಿದ್ದರು. ಇವರು ಆರೋಪಿಗಳನ್ನು ಪತ್ತೆ ಹಚ್ಚಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಮಹದೇವಿ ಅವರು ಎಮ್ಮೆ ಮೇಯಿಸಲು ತೋಪಿನ ಹತ್ತಿರ ಒಬ್ಬರೇ ಬರುವುದನ್ನು ನೋಡಿ, 3–4 ದಿನ ಹೊಂಚು ಹಾಕಿ ಚಿನ್ನಾಭರಣ ದೋಚುವ ಉದ್ದೇಶದಿಂದ ಹತ್ಯೆ ಮಾಡಲಾಯಿತು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.