ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ: ಬದನವಾಳು ಗ್ರಾಮದಲ್ಲಿ ಸಂಚಲನ ಮೂಡಿಸಿದ ರಾಹುಲ್‌ ನಡೆ

‘ಜೋಡಿ’ಸಿದ ರಸ್ತೆ, ವೈಷಮ್ಯ ನಿವಾರಣೆಗೆ ಯತ್ನ
Last Updated 2 ಅಕ್ಟೋಬರ್ 2022, 13:54 IST
ಅಕ್ಷರ ಗಾತ್ರ

ಬದನವಾಳು (ಮೈಸೂರು ಜಿಲ್ಲೆ): ಭಾರತ್‌ ಜೋಡೊ ಯಾತ್ರೆಯಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬದನವಾಳು ಗ್ರಾಮದಲ್ಲಿ ಮತ್ತು ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮನಸ್ಸುಗಳನ್ನು ಜೋಡಿಸುವ ಕಾರ್ಯದಲ್ಲಿ ಭಾಗಿಯಾದರು.

ಸಹಚಿಂತನ, ಸಹಭೋಜನ ಮತ್ತು ಶ್ರಮ ದಾನದಿಂದ ಗ್ರಾಮಸ್ಥರ ಮನ ಗೆದ್ದರು. 1993ರಲ್ಲಿ ನಡೆದಿದ್ದ ಗಲಭೆಯಿಂದ ವೀರಶೈವ ಲಿಂಗಾಯತ–ದಲಿತರ ನಡುವೆ ಉಂಟಾಗಿದ್ದ ವೈಷಮ್ಯ ನಿವಾರಣೆಗೆ ಪ್ರಯತ್ನಿಸಿದರು. ಗ್ರಾಮದಲ್ಲಿ ಸಂಚಲನ ಮೂಡಿಸಿದ ಅವರ ಭೇಟಿಯ ನೆನಪಿಗಾಗಿ ಕೆಲವು ಸೇವಾ ಕಾರ್ಯಗಳು ಕೂಡ ನಡೆದವು. ಕೆಲವು ಹಳೆಯ ಮನೆಗಳಿಗೆ ಆಯೋಜಕರು ಸುಣ್ಣ–ಬಣ್ಣ ಮಾಡಿಸಿಕೊಟ್ಟಿದ್ದಾರೆ.

ರಾಜ್ಯದಲ್ಲಿ ಯಾತ್ರೆಯ 3ನೇ ದಿನವಾದ ಭಾನುವಾರ ಬೆಳಿಗ್ಗೆ ತಾಂಡವಪುರದ ವಾಸ್ತವ್ಯ ಸ್ಥಳದಿಂದ, 1927ರಲ್ಲಿ ಗಾಂಧೀಜಿ ಭೇಟಿ ನೀಡಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣಕ್ಕೆ ಆಗಮಿಸಿದ ಅವರು ರಾಷ್ಟ್ರಪಿತನ ಪುತ್ಥಳಿಗೆ ನಾಯಕರೊಂದಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಪ್ರಸ್ತುತಪಡಿಸಿದ ಭಜನೆ ಕಾರ್ಯಕ್ರಮದಲ್ಲಿ ಗಾಂಧಿ ಪ್ರಿಯ ಭಜನೆಗಳನ್ನು ಆಲಿಸಿದರು.

ನಂತರ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹತ್ತಿಯ ಕೊರತೆಯಿಂದಾಗಿ ಕೆಲಸ ಕಳೆದುಕೊಂಡಿರುವ ಮಹಿಳೆಯರೊಂದಿಗೆ ಸಂವಾದ ನಡೆಸಿ ಸಂಕಷ್ಟವನ್ನು ಆಲಿಸಿದರು. ಭೇಟಿಯ ಸ್ಮರಣೆಗಾಗಿ ಕೇಂದ್ರದಲ್ಲಿ ತೆಂಗಿನ ಸಸಿ ನೆಟ್ಟು ನೀರೆರೆದರು. ಅವರೊಂದಿಗೆ ಯಾತ್ರೆಯಲ್ಲಿರುವ ‘ಭಾರತ ಯಾತ್ರಿ’ಗಳೂ ಗಿಡಗಳನ್ನು ನೆಟ್ಟರು.

ಭಾರತ್‌ ಜೋಡೊ ಯಾತ್ರೆ ಅಂಗವಾಗಿ ಬದನವಾಳು ಗ್ರಾಮದಲ್ಲಿ ನಿರ್ಮಿಸಿರುವ ಎರಡು ಕೇರಿಗಳನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಪೇವರ್ಸ್‌ ಅಳವಡಿಸುವ ಮೂಲಕ ಭಾನುವಾರ ಉದ್ಘಾಟಿಸಿದರು/ ಪ್ರಜಾವಾಣಿ ಚಿತ್ರ: ಅನೂಪ್‌ರಾಘ ಟಿ.
ಭಾರತ್‌ ಜೋಡೊ ಯಾತ್ರೆ ಅಂಗವಾಗಿ ಬದನವಾಳು ಗ್ರಾಮದಲ್ಲಿ ನಿರ್ಮಿಸಿರುವ ಎರಡು ಕೇರಿಗಳನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಪೇವರ್ಸ್‌ ಅಳವಡಿಸುವ ಮೂಲಕ ಭಾನುವಾರ ಉದ್ಘಾಟಿಸಿದರು/ ಪ್ರಜಾವಾಣಿ ಚಿತ್ರ: ಅನೂಪ್‌ರಾಘ ಟಿ.

ಎರಡು ಕೇರಿಗಳ ಬೆಸೆಯುವ ರಸ್ತೆ:ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡದ ನಂತರ ವೈಷಮ್ಯ ಇದ್ದಿದ್ದರಿಂದ, ಎರಡು ಕೇರಿಗಳ ನಡುವಿನ ರಸ್ತೆಯು ಬಳಕೆಯಲ್ಲಿರಲಿಲ್ಲ. ‘ಯಾತ್ರೆ’ ಹಿನ್ನೆಲೆಯಲ್ಲಿ ಎರಡೂ ಬೀದಿಗಳನ್ನು ಜೋಡಿಸುವುದಕ್ಕಾಗಿ ರಸ್ತೆ ನಿರ್ಮಿಸಲಾಗಿದ್ದು, ಅದಕ್ಕೆ ಪೇವರ್ಸ್‌ ಅಳವಡಿಸಲಾಗಿದೆ. ಅದಕ್ಕೆ ‘ಭಾರತ್ ಜೋಡೊ ರಸ್ತೆ’ ಎಂಬ ಹೆಸರಿಟ್ಟು ಫಲಕ ಅಳವಡಿಸಲಾಗಿದೆ. 180 ಮೀಟರ್‌ ಉದ್ದದ ರಸ್ತೆಯನ್ನು ಪೇವರ್ಸ್‌ ಜೋಡಿಸುವ ಮೂಲಕ ರಾಹುಲ್‌ ಉದ್ಘಾಟಿಸಿದರು. ಸ್ಥಳೀಯರೊಂದಿಗೆ ಆ ಮಾರ್ಗದಲ್ಲಿ ಹೆಜ್ಜೆ ಹಾಕಿದರು. ದಲಿತರ ಕೇರಿಯಲ್ಲಿದ್ದ ಮಹಾತ್ಮ ಗಾಂಧೀಜಿ ಪ್ರತಿಮೆಗೆ ನಮನ ಸಲ್ಲಿಸಿದರು.

‘ಗಲಭೆ ನಡೆದ ನಂತರದಿಂದಲೂ ಈ ರಸ್ತೆಯನ್ನು ಹೆಚ್ಚಿನವರು ಬಳಸುತ್ತಿರಲಿಲ್ಲ. ಗಿಡ–ಗಂಟಿಗಳು ಬೆಳೆದಿದ್ದವು. ಅದನ್ನು ಎರಡೂ ಸಮುದಾಯಗಳ ಮುಖಂಡರ ಮನವೊಲಿಸಿ ದುರಸ್ತಿಪಡಿಸಿ, ಪೇವರ್ಸ್‌ ಅಳವಡಿಸಿದ್ದೇವೆ. ಶ್ರಮದಾನದಲ್ಲಿ ಸ್ಥಳೀಯರೆಲ್ಲರೂ ಭಾಗವಹಿಸಿದ್ದಾರೆ. ಇದಕ್ಕೆ ಪಕ್ಷದಿಂದ ಹಣ ನೀಡಿಲ್ಲ. ಸ್ಥಳೀಯರಿಂದಲೇ ಸಂಗ್ರಹಿಸಿದ್ದೇವೆ. ಒಡೆದಿದ್ದ ಮನಸ್ಸುಗಳನ್ನು ಜೋಡಿಸುವ ಕಾರ್ಯವು ಜೋಡೊ ಯಾತ್ರೆಯಿಂದಾಗಿ ನಡೆದಿದೆ’ ಎಂದು ಮುಖಂಡರಾದ ಬಸವರಾಜ ಹಾಗೂ ಕಳಲೆ ಕೇಶವಮೂರ್ತಿ ತಿಳಿಸಿದರು.

ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಭಾರತ್‌ ಜೋಡೊ ಯಾತ್ರೆ ನೆನಪಿನ ರಸ್ತೆ
ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಭಾರತ್‌ ಜೋಡೊ ಯಾತ್ರೆ ನೆನಪಿನ ರಸ್ತೆ

ಗ್ರಾಮದಲ್ಲಿ ಪ್ರದಕ್ಷಿಣೆ:ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆಯಲ್ಲಿ ಸಂಚರಿಸಿದ ರಾಹುಲ್ ಅವರನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು. ಮಹಿಳೆಯರು, ಮಕ್ಕಳನ್ನು ಮಾತನಾಡಿಸಿದ ರಾಹುಲ್‌ ನಿವಾಸಿಗಳ ಮನಸ್ಸು ಬೆಸೆಯುವ ಕೆಲಸ ಮಾಡಿದರು. ಬಾಲಕಿಯರೊಂದಿಗೆ ನಡೆದರು. ನಂತರ, ‘ಯಾತ್ರೆ ಸ್ಮರಣಾರ್ಥ’ ಶಾಲೆ–ಅಂಗನವಾಡಿ ಕೇಂದ್ರದ ಕಾಂಪೌಂಡ್‌ಗೆ ಬಣ್ಣ ಹಚ್ಚಿದ್ದ ಜಾಗದಲ್ಲಿ ಬಣ್ಣದಿಂದ ಹಸ್ತದ ಗುರುತು ಮೂಡಿಸಿದರು. ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ನಾಯಕ ಕೆ.ಸಿ.ವೇಣುಗೋಪಾಲ್‌ ಮೊದಲಾದವರು ಸಾಥ್ ನೀಡಿದರು.

ಸಹ ಭೋಜನ:ವೀರಶೈವ ಲಿಂಗಾಯತರು, ಹಿಂದುಳಿದವರು ಹಾಗೂ ದಲಿತರೊಂದಿಗೆ ರಾಹುಲ್‌ ಮತ್ತು ನಾಯಕರು ಸಹಭೋಜನ ಮಾಡಿದರು. ಅಲ್ಲಿನ ವಿವಿಧ ಸಮಾಜದವರು ಸಹಪಂಕ್ತಿಯಲ್ಲಿ ಊಟ ಮಾಡಿದ್ದು 29 ವರ್ಷಗಳ ನಂತರ ಇದೇ ಮೊದಲು ಎಂದು ಮುಖಂಡರು ತಿಳಿಸಿದರು.

ಮೂರ್ನಾಲ್ಕು ಮಂದಿ ಆಯಾ ಸಮಾಜದ ಪ್ರತಿನಿಧಿಗಳ ನಡುವೆ ಒಬ್ಬರು ನಾಯಕರು ಕಳಿತು ಭೋಜನ ಸವಿದರು. ರಾಹುಲ್‌ ಮಕ್ಕಳೊಂದಿಗೆ ಕುಳಿತಿದ್ದರು. ನಮ್ಮದು ಸಮಾಜಗಳ ಮನಸ್ತಾಪ ನಿವಾರಿಸಿ, ಐಕ್ಯತೆಗೆ ಶ್ರಮಿಸುವ ನಡೆಯಾಗಿದೆ ಎಂಬ ಸಂದೇಶವನ್ನು ರವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT