ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಕಾರ್ಯಕರ್ತರ ಜೊತೆಗೂಡಿ ನಗರದಾದ್ಯಂತ ಮೈಸೂರು ನಗರದಲ್ಲಿ ಬಿರುಸಿನ ಚುನಾವಾಣಾ ಪ್ರಚಾರ ನಡೆಸಿದರು.
ಮುಂಜಾನೆ ಕುಕ್ಕರಹಳ್ಳಿ ಕೆರೆ ಅಂಗಳದಲ್ಲಿ ಹೆಜ್ಜೆ ಇಟ್ಟ ಯದುವೀರ್ ವಾಯುವಿಹಾರಿಗಳ ಜೊತೆ ಚೇತೋಹಾರಿ ಮಾತುಕತೆಯಲ್ಲಿ ಪಾಲ್ಗೊಂಡರು. ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಹಾಗೂ ಮೈಸೂರು ಅಭಿವೃದ್ಧಿ ಬಗ್ಗೆ ತಮ್ಮ ಪರಿಕಲ್ಪನೆಗಳ ಕುರಿತು ವಿವರಿಸಿ ಕಮಲದ ಗುರುತಿಗೆ ಮತ ನೀಡುವಂತೆ ಕೋರಿದರು. ದೇವರಾಜ ಮಾರುಕಟ್ಟೆಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದರು.
ವಿವಿಧ ಸಮುದಾಯಗಳ ಮುಖಂಡರ ಜೊತೆ ಸಭೆ ನಡೆಸಿದ ಅವರು, ಪ್ರಮುಖ ಸಂಘ-ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ನಗರದ ಟಿ.ಕೆ. ಲೇಔಟ್ ನಲ್ಲಿರುವ ಶ್ರೀಕೃಷ್ಣಧಾಮಕ್ಕೆ ಭೇಟಿ ನೀಡಿದ ಯದುವೀರ್, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯ ಆಶೀರ್ವಾದ ಪಡೆದರು. ಶಾಸಕ ಟಿ.ಎಸ್. ಶ್ರೀವತ್ಸ, ಜೋಗಿ ಮಂಜು, ವಸಂತ್ ಕುಮಾರ್, ರವಿ ಶಾಸ್ತ್ರಿ, ವಿಕ್ರಮ ಅಯ್ಯಂಗಾರ್ ಇದ್ದರು.
ಲಿಂಗಾಂಬುದಿ ಪಾಳ್ಯದಲ್ಲಿ ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ಪಾಲ್ಗೊಂಡು, ನಂತರ ಯಾದವಗಿರಿಯಲ್ಲಿ ಗುಜರಾತಿ ಸಮುದಾಯದವರೊಂದಿಗೆ ಸಭೆ ಮತ್ತು ಅಶೋಕ ರಸ್ತೆಯಲ್ಲಿ ಜೈನ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು. ರಾತ್ರಿ ಕೈಲಾಸಪುರಂ ಮತ್ತು ಮಂಡಿ ಮೊಹಲ್ಲಾ ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಸಿದರು.