ಮೈಸೂರು: ಬಿಜೆಪಿ, ಜೆಡಿಎಸ್ನ ಹಲವು ಮುಖಂಡರ ಕಾಂಗ್ರೆಸ್ ಸೇರ್ಪಡೆ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಭಾವಚಿತ್ರ ಬಳಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಮುಖಂಡ ಎಚ್.ವಿ. ರಾಜೀವ್ ಬುಧವಾರ ಕಾಂಗ್ರೆಸ್ ಸೇರುತ್ತಿದ್ದು, ಈ ಸಂಬಂಧ ಕೆಲವು ಮಾಧ್ಯಮಗಳಿಗೆ ನೀಡಲಾದ ಜಾಹೀರಾತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಕವೇ ಸೋಮಶೇಖರ್ ಭಾವಚಿತ್ರವನ್ನೂ ಬಳಸಲಾಗಿದೆ. ಅಲ್ಲದೇ ವೇದಿಕೆ ಕಾರ್ಯಕ್ರಮದ ಪೋಸ್ಟರ್ಗಳಲ್ಲಿ ಸಹ ಅವರ ಭಾವಚಿತ್ರವಿದೆ ಎನ್ನಲಾಗಿದೆ. ಇದು ಸ್ಥಳೀಯ ಬಿಜೆಪಿ ಮುಖಂಡರ ಸಿಟ್ಟಿಗೆ ಕಾರಣವಾಗಿದೆ.
‘ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮಕ್ಕೆ ತಮ್ಮ ಭಾವಚಿತ್ರ ಬಳಸಿಕೊಳ್ಳಲು ಸೋಮಶೇಖರ್ ಅನುಮತಿ ಕೊಟ್ಟಿರುವ ಬಗ್ಗೆ ಖಾತ್ರಿ ಇಲ್ಲ. ಅವರ ಅನುಮತಿ ಇಲ್ಲದೇ ಭಾವಚಿತ್ರ ಬಳಕೆ ಮಾಡುವುದು ತಪ್ಪಾಗುತ್ತದೆ. ತನ್ಮೂಲಕ ಕೆಟ್ಟ ಸಂದೇಶ ರವಾನಿಸಲು ಮುಖಂಡ ಎಚ್.ರಾಜೀವ್ ಮುನ್ನುಡಿ ಬರೆಯಲು ಮುಂದಾಗಿದ್ದಾರೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಟೀಕಿಸಿದರು.
ಈ ಕುರಿತು ಮಂಗಳವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ತಿಳಿಸಿದರು.