ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಸೂಲಿ ಮಾಡಿ, ಸೌಲಭ್ಯ ಕಲ್ಪಿಸಿ

ಪಾಲಿಕೆಯಿಂದ 2023–24ನೇ ಸಾಲಿನ ಬಜೆಟ್ ಸಭೆಯಲ್ಲಿ ಒತ್ತಾಯ
Last Updated 19 ಡಿಸೆಂಬರ್ 2022, 11:26 IST
ಅಕ್ಷರ ಗಾತ್ರ

ಮೈಸೂರು: ಆಸ್ತಿ, ನೀರಿನ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡಿ. ಆದಾಯದ ಮೂಲಗಳನ್ನು ಕಂಡುಕೊಳ್ಳಿ. ವರಮಾನ ಸೋರಿಕೆ ತಡೆಯಿರಿ. ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ಕೊಡಿ.

– ಮಾಜಿ ಮೇಯರ್‌ಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳಿಂದ ಕೇಳಿಬಂದ ಒತ್ತಾಯಗಳಿವು.

ಮಹಾನಗರಪಾಲಿಕೆಯ 2023–24ನೇ ಸಾಲಿನ ಬಜೆಟ್ ತಯಾರಿಗಾಗಿ ಮೇಯರ್‌ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮುಖಂಡರ ಅಭಿಪ್ರಾಯಗಳನ್ನು ಆಲಿಸಲಾಯಿತು.

ಹೋದ ವರ್ಷ ನೀಡಿದ್ದ ಸಲಹೆಗಳನ್ನು ಅನುಷ್ಠಾನಕ್ಕೆ ತರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮೇಯರ್‌ಗಳು, ಪಾಲಿಕೆಯು ಮತ್ತಷ್ಟು ಜನಸ್ನೇಹಿ ಹಾಗೂ ಕ್ರಿಯಾಶೀಲವಾಗಬೇಕು ಎಂದು ಬಯಸಿದರು. ಆದಾಯ ಹೆಚ್ಚಿಸಿಕೊಳ್ಳಲು ಲಭ್ಯವಿರುವ ದಾರಿಗಳನ್ನೂ ತೋರಿಸಿದರು.

ವಿಳಂಬ ಸಲ್ಲದು:

‘ಹೊಸ ಹಾಗೂ ರೆವಿನ್ಯೂ ಬಡಾವಣೆಗಳಲ್ಲಿ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುತ್ತದೆ. ಅಂತೆಯೇ ಉದ್ದಿಮೆ ಪರವಾನಗಿಯನ್ನೂ ವಸೂಲಿ ಮಾಡಬೇಕು. ಖಾತೆ, ಕಂದಾಯ ಹಾಗೂ ನಕ್ಷೆ ನೀಡಲು ವಿಳಂಬವಾಗಬಾರದು’ ಎಂದು ಮಾಜಿ ಮೇಯರ್‌ ಬಿ.ಎಲ್.ಭೈರಪ್ಪ ಒತ್ತಾಯಿಸಿದರು.

ಅಸಮಾಧಾನ:

ಬಿಜೆಪಿ ಮುಖಂಡ ಎಸ್.ಸಂದೇಶ್‌ಸ್ವಾಮಿ ಮಾತನಾಡಿ, ‘ನಿಯಮದಲ್ಲಿದೆ ಎಂಬ ಕಾರಣಕ್ಕೆ ಸಭೆ ನಡೆಸಿದರೆ ಪ್ರಯೋಜನವಾಗದು. ಅವುಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿ ಬಜೆಟ್‌ನಲ್ಲೂ ಕೆಲವು ಹೊಸ ಯೋಜನೆ ಸೇರಿಸುತ್ತೀರಿ. ಅವು ಅನುಷ್ಠಾನಕ್ಕೆ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತೆರಿಗೆ ಕಟ್ಟಿಸಿಕೊಳ್ಳಲು ಆನ್‌ಲೈನ್ ವ್ಯವಸ್ಥೆ ಮಾಡಿದ್ದೀರಿ. ಆದರೆ, ಸರ್ವರ್ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಯಾರದು? ನಿವೃತ್ತ ಅಧಿಕಾರಿಯೊಬ್ಬರು ಖಾತೆ ವರ್ಗಾವಣೆಗೆ ಹೋದಾಗ, ಅವರನ್ನು ಅಲೆಸಲಾಗಿದೆ. 36 ಕಾರಣ ಹೇಳಲಾಗಿದೆ. ಅದನ್ನೆಲ್ಲಾ ಪಟ್ಟಿ ಮಾಡಿ, ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ನಿರ್ವಹಣೆಗೆ ಕ್ರಮ ವಹಿಸಿ:

ಮುಖಂಡ ಬಿ.ಕೆ.ಪ್ರಕಾಶ್ ಮಾತನಾಡಿ, ‘ಖರ್ಚು ಜಾಸ್ತಿ ಮಾಡುತ್ತಿರುವುದು ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವುದು ಪಾಲಿಕೆಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ಗುಂಡಿ ಮುಚ್ಚುವುದನ್ನು ವ್ಯವಸ್ಥಿತವಾಗಿ ನಡೆಸಬೇಕು. ನಗರವನ್ನು ಟೂರಿಸಂ ಹಬ್ ಆಗಿಸಬೇಕು. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕು. ಸ್ಮಶಾನಗಳು, ಮಾರುಕಟ್ಟೆಗಳ ನಿರ್ವಹಣೆಗೆ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

ಗಂಭೀರವಾಗಿ ಪರಿಗಣನೆ:

ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ‘ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೋದ ವರ್ಷ ಬಂದಿದ್ದ ಸಲಹೆಗಳಲ್ಲಿ ಕೆಲವನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಪೌರಕಾರ್ಮಿಕರಿಗಾಗಿ 15 ಕಡೆಗಳಲ್ಲಿ ವಿಶ್ರಾಂತಿ ಗೃಹ ಮಾಡುತ್ತಿದ್ದೇವೆ. 10 ಸಿದ್ಧಗೊಂಡಿದ್ದು, ಬಳಕೆಯಾಗುತ್ತಿವೆ. ಐದು ಕಡೆಗಳಲ್ಲಿ ನಿರ್ಮಾಣ ಹಂತದಲ್ಲಿವೆ. ಈ ವರ್ಷವೂ 15 ಕಡೆಗಳಲ್ಲಿ ನಿರ್ಮಿಸಲಾಗುವುದು’ ಎಂದು ಹೇಳಿದರು.

‘ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ 195 ಆಟೊರಿಕ್ಷಾಗಳು ಹಾಗೂ ವಾರ್ಡ್‌ಗೊಂದು ಟ್ರ್ಯಾಕ್ಟರ್‌ಗಳನ್ನು ಹೋದ ವರ್ಷ‌ ಕೊಡಲಾಗಿದೆ.ಡಿ.ದೇವರಾಜ ಅರಸು ರಸ್ತೆಯಲ್ಲಿ ಪಿಂಕ್‌ ಶೌಚಾಲಯ ನಿರ್ಮಿಸಲಾಗುತ್ತಿದ್ದು, ತಿಂಗಳಲ್ಲಿ ಸಿದ್ಧವಾಗಲಿದೆ. ತ್ಯಾಜ್ಯ ವಿಲೇವಾರಿಯಲ್ಲಿ ವಿಳಂಬವಾಗಿದ್ದರೆ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಸಲಹೆಗಳು ವ್ಯರ್ಥವಾಗದಂತೆ:

ಮೇಯರ್ ಶಿವಕುಮಾರ್‌ ಮಾತನಾಡಿ, ‘ಸಲಹೆಗಳು ವ್ಯರ್ಥವಾಗದಂತೆ ನೋಡಿಕೊಳ್ಳಲಿದ್ದೇನೆ. ಸಿಎ ನಿವೇಶನಗಳನ್ನು ಮುಡಾದಿಂದ ಪಡೆದುಕೊಳ್ಳಲಾಗುವುದು. ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿಸ್) ಮರುಬಳಕೆ ಘಟಕ ನಿರ್ಮಾಣ ಯೋಜನೆಗೆ ಮರು ಚಾಲನೆ ಕೊಡಲಾಗುವುದು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ಸ್ಮಶಾನಗಳ ನಿರ್ವಹಣೆಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ಮಾಜಿ ಉಪಮೇಯರ್ ಮಹದೇವಮ್ಮ, ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯ್‌ಕುಮಾರ್‌ ಮಾತನಾಡಿದರು. ಉಪ ಮೇಯರ್‌ ಡಾ.ರೂಪಾ ಯೋಗೇಶ್, ಆಡಳಿತ ಪಕ್ಷದ ನಾಯಕಿ ಅಶ್ವಿನಿ ಅನಂತು, ವಿರೋಧಪಕ್ಷದ ನಾಯಕ ಅಯೂಬ್‌ ಖಾನ್ ಹಾಗೂ ಅಧಿಕಾರಿಗಳು ಇದ್ದರು.

ಸಲಹೆಗಳು

ತೆರಿಗೆ ಅವೈಜ್ಞಾನಿಕವಾಗಿ ಹೆಚ್ಚಿಸದಿರಿ

ತೆರಿಗೆಯನ್ನು ವೈಜ್ಞಾನಿಕವಾಗಿ ಹೆಚ್ಚಿಸುವುದು ಸರಿಯಲ್ಲ. ನಿವೃತ್ತ ಐಬಿ ಅಧಿಕಾರಿ ಕುಲಕರ್ಣಿ ಕೊಲೆ ಪ್ರಕರಣವನ್ನು ಪಾಠವಾಗಿ ತೆಗೆದುಕೊಂಡು, ಕಟ್ಟಡಗಳು ನಿರ್ಮಾಣ ಹಂತದಲ್ಲಿರುವಾಗಲೇ ಅಕ್ರಮಗಳನ್ನು ತಡೆಯಬೇಕು. ಫಾಸ್ಟ್‌ಫುಡ್‌ಗಳವರು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು.

–ಮೋದಾಮಣಿ, ಮಾಜಿ ಮೇಯರ್‌

ಅಸಮಾಧಾನವಿದೆ

ನಾವು ಪ್ರತಿ ವರ್ಷವೂ ಸಲಹೆಗಳನ್ನು ಕೊಡುತ್ತಿದ್ದೇವೆ. ಆದರೆ, ಅನುಷ್ಠಾನದ ಬಗ್ಗೆ ಅಸಮಾಧಾನವಿದೆ. ವಾರ್ಡ್ ಸಮಿತಿಗಳನ್ನು ಮರು ಕ್ರಿಯಾಶೀಲಗೊಳಿಸಬೇಕು. ಅವಶ್ಯವಿದ್ದಲ್ಲಿ ಹೊಸದಾಗಿ ರಚಿಸಬೇಕು. ಅದರಿಂದ ತೆರಿಗೆ ಸಂಗ್ರಹಕ್ಕೂ ಅನುಕೂಲವಾಗುತ್ತದೆ.

–ರಾಮನಾಥ್, ನಾಗರಿಕ

ಪೌರಕಾರ್ಮಿಕರಿಗೆ ನೆರವಾಗಿ

ಪೌರಕಾರ್ಮಿಕರಿಗೆ ಪ್ರತ್ಯೇಕವಾಗಿ ಶೌಚಾಲಯ, ವಿಶ್ರಾಂತಿ ಗೃಹಗಳನ್ನು ನಿರ್ಮಿಸಿಕೊಡಬೇಕು. ಮಹಿಳಾ ಪೌರಕಾರ್ಮಿಕರ ಆಗುತ್ತಿರುವ ಮುಜುಗರವನ್ನು ತಪ್ಪಿಸಬೇಕು. ಶೇ 24.10ರಷ್ಟು ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಬಾಕಿ ಇಟ್ಟುಕೊಳ್ಳಬಾರದು. ಫಲಾನುಭವಿಗಳಿಗೆ ತಲುಪಿಸಬೇಕು.

–ರುಷೋತ್ತಮ್, ಮಾಜಿ ಮೇಯರ್‌

ಪಿಂಕ್ ಆಟೊರಿಕ್ಷಾ ಬೇಕು

ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಆಟೊರಿಕ್ಷಾ ಸೇವೆ ಆರಂಭಿಸಬೇಕು. ಅಲ್ಲಲ್ಲಿ ಪಿಂಕ್‌ ಶೌಚಾಲಯಗಳನ್ನು ನಿರ್ಮಿಸಬೇಕು. ಹೊಲಿಗೆ ಯಂತ್ರಗಳನ್ನು ವಿತರಿಸಬೇಕು

– ಪುಷ್ಪವಲ್ಲಿ, ಮಾಜಿ ಉಪ ಮೇಯರ್

ಅನುದಾನ ತನ್ನಿ

ಡಬಲ್ ಎಂಜಿನ್ ಸರ್ಕಾರಗಳಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಬೇಕು. ಇದಕ್ಕಾಗಿ ನಿಯೋಗ ಕರೆದುಕೊಂಡು ಹೋಗಬೇಕು

– ಶಾಂತಕುಮಾರಿ, ಪಾಲಿಕೆ ಸದಸ್ಯೆ

ಶಿಕ್ಷಣಕ್ಕೆ ಆದ್ಯತೆ ಕೊಡಿ

ನಗರದಲ್ಲಿ ಸಸಿ ನೆಡುವ ಕಾರ್ಯ ನಡೆಯಬೇಕು. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕು. ಜಾಲತಾಣದಲ್ಲಿ ಎಲ್ಲ ಮಾಹಿತಿಯೂ ಲಭ್ಯವಾಗುವಂತೆ ಮಾಡಬೇಕು

–ಉಷಾ, ಕೆಎಸ್ಒಯು

ಆ್ಯಪ್‌ ಮಾಡಿ

ರಸ್ತೆ ಗುಂಡಿ ಉಂಟಾಗಿದ್ದರೆ, ಅಂಡರ್‌ಪಾಸ್‌ ಹಾಳಾಗಿದ್ದರೆ ಸರಿಪಡಿಸಲು ಪಾಲಿಕೆಯ ಗಮನಕ್ಕೆ ತರುವುದಕ್ಕಾಗಿ ಪ್ರತ್ಯೇಕವಾಗಿ ಮೊಬೈಲ್‌ ಆ್ಯಪ್ ರೂಪಿಸಬೇಕು.

–ಪಿ.ವಿಶ್ವನಾಥ್, ಮಾಜಿ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT