ಮೈಸೂರು: ಕೆಎಸ್ಆರ್ಟಿಸಿ ಬಸ್ಗಳು ಚುನಾವಣೆಯ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ದೂರದ ಊರುಗಳಿಗೆ ತೆರಳುವ ಜನ ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ಗಂಟೆಗಟ್ಟಲೆ ಕಾದರು. ಕಾಲೇಜು ಮುಗಿಸಿಕೊಂಡು ತಮ್ಮೂರಿಗೆ ಮತದಾನಕ್ಕಾಗಿ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಗ್ರಾಮಾಂತರ ಬಸ್ ನಿಲ್ದಾಣ ತುಂಬಿ ತುಳುಕುತ್ತಿತ್ತು.
ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಮಸ್ಟರಿಂಗ್ ಕೇಂದ್ರಕ್ಕೆ ಕರೆದೊಯ್ಯಲು ಕೆಎಸ್ಆರ್ಟಿಯ ಮೈಸೂರು ವಿಭಾಗದ 255 ಹಾಗೂ ಗ್ರಾಮಾಂತರ ವಿಭಾಗದ 220 ಬಸ್ ಸೇರಿ ಒಟ್ಟು 473 ಬಸ್ಗಳನ್ನು ಬಳಸಲಾಗಿದೆ. ಹೀಗಾಗಿ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್ಗಳ ಸಂಖ್ಯೆಯನ್ನು ಗುರುವಾರ ಬೆಳಿಗ್ಗೆಯಿಂದಲೇ ಇಳಿಸಲಾಗಿತ್ತು. ನಗರ ಹಾಗೂ ಗ್ರಾಮೀಣ ಭಾಗದ ಜನರೂ ಸಮಸ್ಯೆ ಅನುಭವಿಸಿದರು.
ಗ್ರಾಮೀಣ ವಿಭಾಗದ 480 ಬಸ್ ಹಾಗೂ ಮೈಸೂರು ವಿಭಾಗದ 281 ಬಸ್ಗಖಯ ಓಡಾಟ ನಡೆಸಿದವು. ಬೆಂಗಳೂರಿಗೆ ಬಹಳಷ್ಟು ಬಸ್ಗಳ ಓಡಾಟವಿತ್ತಾದರೂ ಅವೂ ಕ್ಷಣಾರ್ಧದಲ್ಲೇ ಪ್ರಯಾಣಿಕರಿಂದ ತುಂಬುತ್ತಿದ್ದವು. ದೂರದ ಊರುಗಳಿಗೆ ತೆರಳುವ ಕೆಲವೇ ಬಸ್ ಓಡಾಟ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದರು. ಮತದಾನದ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಬಸ್ ಸಂಚಾರ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಲಾಖೆಯು ಮಾಹಿತಿ ನೀಡಿತ್ತು. ಅದಾಗ್ಯೂ ಊರುಗಳಿಗೆ ತೆರಳುವವರು ಮುಂಜಾನೆಯಿಂದಲೇ ಬಸ್ ನಿಲ್ದಾಣಕ್ಕೆ ಬರಲಾರಂಭಿಸಿದರು.
‘ಬಸ್ಗಳ ಸಂಖ್ಯೆ ಕಡಿಮೆಯಿದೆ. ಸಾರ್ವಜನಿಕರಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ನಾಲ್ಕೈದು ಬಸ್ ತೆರಳುವ ಜಾಗಕ್ಕೆ ಮೂರು ಬಸ್ ಓಡಾಟ ನಡೆಸುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಖಾಸಗಿ ಬಸ್ಗಳಲ್ಲೂ ಜಾಗವಿಲ್ಲ
ಖಾಸಗಿ ಬಸ್ಗಳೂ ಪ್ರಯಾಣಿಕರಿಂದ ತುಂಬಿದ್ದವು. ಗುರುವಾರ ಬೆಳಿಗ್ಗಿನಿಂದಲೇ ಮುಂಗಡ ಕಾಯ್ದಿರಿಸಲು ಅವಕಾಶ ಸಿಕ್ಕಿರಲಿಲ್ಲ. ಟಿಕೆಟ್ ದರವೂ ಹೆಚ್ಚಿಸಲಾಗಿದೆ ಎಂದು ಪ್ರಯಾಣಿಕರು ದೂರಿದರು. ‘ಮಂಗಳೂರಿಗೆ ತೆರಳಲು ಸುಮಾರು ₹700 ಪಡೆಯುತ್ತಿದ್ದರು. ಆದರೆ ಇಂದು ಅದು ಸಾವಿರದ ಗಡಿ ದಾಟಿದೆ. ಹಾಗಿದ್ದರೂ ಸೀಟ್ ದೊರೆಯುತ್ತಿಲ್ಲ’ ಎಂದು ಪ್ರಯಾಣಿಕ ವಿನಯ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.