ಮೈಸೂರು: ‘ರಾಜಕೀಯಕ್ಕೆ ಬರುವ ವಿಚಾರದಲ್ಲಿ ನನ್ನಲ್ಲಿ ಇನ್ನೂ ಗೊಂದಲಗಳಿವೆ’ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು, ‘ಪತ್ನಿ, ಮಕ್ಕಳು ಹಾಗೂ ಕುಟುಂಬದ ಎಲ್ಲರೊಂದಿಗೆ ಇನ್ನೂ ಚರ್ಚಿಸಬೇಕಿದೆ. ಸದ್ಯಕ್ಕೆ ಯಾವುದೇ ತೀರ್ಮಾನವನ್ನೂ ಮಾಡಿಲ್ಲ’ ಎಂದು ತಿಳಿಸಿದರು.
‘ಜನರು ಹಾಗೂ ಮಾಧ್ಯಮದವರು ನನ್ನ ಮೇಲಿನ ಪ್ರೀತಿಯಿಂದ ನನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮಾಡಿದ ಒಳ್ಳೆಯ ಕೆಲಸದ ನಿರೀಕ್ಷೆಯಲ್ಲೇ ಈ ಒತ್ತಾಯಗಳು ಕೇಳಿಬರುತ್ತಿವೆ. ನನಗೆ ಬೀದಿ ರಾಜಕೀಯ ಇಷ್ಟವಿಲ್ಲ. ಅಭಿವೃದ್ಧಿಯ ರಾಜಕೀಯದ ಬಗ್ಗೆ ಆಸಕ್ತಿ ಇದೆ. ಆದರೆ, ರಾಜಕಾರಣಕ್ಕೆ ಬರಬೇಕೋ, ಬೇಡವೋ ಎನ್ನುವ ಗೊಂದಲವಿದೆ. ಹಾಗೆಂದು ನಾನು ಭಯ ಪಡುತ್ತಿದ್ದೇನೆ ಎಂದರ್ಥವಲ್ಲ’ ಎಂದು ಪ್ರತಿಕ್ರಿಯಿಸಿದರು.