ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜವಂಶಸ್ಥರೋ, ಸಾಮಾನ್ಯರೋ ಎಂಬುದನ್ನು ನಿರ್ಧರಿಸಿ’

Published 24 ಏಪ್ರಿಲ್ 2024, 16:18 IST
Last Updated 24 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾಪ್ರಭುತ್ವದಲ್ಲಿ ಗೆಲುವು ರಾಜವಂಶಸ್ಥರಿಗೋ ಅಥವಾ ಸಾಮಾನ್ಯರಿಗೋ ಎಂಬುದನ್ನು ಮೈಸೂರು ಜನತೆ ನಿರ್ಧರಿಸಬೇಕು. ರಾಜ್ಯದ ಜನರ ಸಮಸ್ಯೆಗಳ ಪರ ಸಂಸತ್ತಿನಲ್ಲಿ ಧ್ವನಿಯೆತ್ತುವ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಬೇಕು’ ಎಂದು ಕಾಂಗ್ರೆಸ್‌ ವಕ್ತಾರೆ ತೇಜಸ್ವಿನಿ ಗೌಡ ಮನವಿ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಕ್ಕಲಿಗರು ಮೈಸೂರಲ್ಲಿ ಸ್ಥಾನಮಾನ ಕೇಳದೇ, ಸಮುದಾಯವೇ ಇಲ್ಲದಿರುವ ಜಾಗದಲ್ಲಿ ಕೇಳಲು ಸಾಧ್ಯವೇ? ಸುಧಾಮೂರ್ತಿ ಅವರಿಗೆ ರಾಜ್ಯಸಭಾ ಸ್ಥಾನ ನೀಡುವ ಬಿಜೆಪಿ ಯದುವೀರ್ ಅವರಿಗೂ ನೀಡಬೇಕಿತ್ತು. ಪ್ರತಾಪಸಿಂಹಗೆ ಟಿಕೆಟ್‌ ಕೈತಪ್ಪಲಿದೆ ಎಂಬ ಸುದ್ದಿ ಬಂದಾಗ ನನಗೆ ಅವಕಾಶ ನೀಡುವಂತೆ ಕೇಳಿದ್ದೆ, ಆದರೆ ಕೊಡಲಿಲ್ಲ. ಕಾರಣ, ಬಿಜೆಪಿ ಒಕ್ಕಲಿಗರನ್ನು ಮುಗಿಸಲು ಹೊರಟಿದೆ’ ಎಂದು ಆರೋಪಿಸಿದರು.

‘ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ‘ಉಂಡು ಹೋದ, ಕೊಂಡು ಹೋದ’ ಎಂಬ ವ್ಯಕ್ತಿ. ಅಧಿಕಾರ ಅರಸಿ ವಿವಿಧ ಪಕ್ಷದೊಂದಿಗೆ ಹೋಗುವ ಅವರಿಂದ ಸಮುದಾಯ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯು ಅವಕಾಶ ದೊರೆತಾಗಲೆಲ್ಲಾ ಒಕ್ಕಲಿಗ ವಿರೋಧಿತನ ತೋರಿದ್ದು, ಯಡಿಯೂರಪ್ಪ ಕೆಳಗಿಳಿದಾಗ ಆರ್‌.ಅಶೋಕ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಸದಾನಂದಗೌಡ, ಸಿ.ಟಿ.ರವಿ, ಪ್ರತಾಪಸಿಂಹಗೆ ಟಿಕೆಟ್ ನೀಡದೇ ವಂಚಿಸಲಾಯಿತು’ ಎಂದು ಹರಿಹಾಯ್ದರು.

‘ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಮುಜರಾಯಿ ದೇವಸ್ಥಾನ ಅರ್ಚಕರ ತಸ್ತೀಕ್‌ ಭತ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿಲ್ಲ. ಮೈಸೂರಿಗೆ ಸ್ಮಾರ್ಟ್ ಸಿಟಿ, ಪಾರಂಪರಿಕ ನಗರ ಎಂದು ಬಂದ ದುಡ್ಡನ್ನು ಗೋಡೆಗೆ ತೇಪೆ ಹಚ್ಚಿ ಕಳೆಯಲಾಗಿದೆ. ಅದರ ಲೆಕ್ಕವೆಲ್ಲಿ? ಕಾಶಿ ಕಾರಿಡಾರ್‌ ಮಾಡುವ ಇವರಿಗೆ ಶೃಂಗೇರಿ ಕಾರಿಡಾರ್‌ ಮಾಡಲು ಮನಸಿಲ್ಲವೇಕೆ? ಮೇಕೆದಾಟು ವಿರೋಧಿಸುವ ಅಣ್ಣಾಮಲೈ ಅವರನ್ನು ಪ್ರಚಾರಕ್ಕೆ ಬಳಸುವ ಇವರು ಬ್ರಿಟಿಷರಿಗಿಂತ ಹೆಚ್ಚು ಒಡೆದು ಆಳುವವರು’ ಎಂದು ‌‌‌ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪ್ರಮುಖರಾದ ಪುಷ್ಪವಲ್ಲಿ, ಲತಾ ಮೋಹನ್‌, ಪುಷ್ಪಲತಾ ಚಿಕ್ಕಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT