ಜಯಪುರ: ಹೋಬಳಿಯ ಡಿ.ಸಾಲುಂಡಿ ಗ್ರಾಮದ ರೈತ ಬಸವನಾಯಕ ಸಮಗ್ರ ಕೃಷಿಯ ಜೊತೆಗೆ ಪುಷ್ಪಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಂದೂವರೆ ಎಕರೆಯಲ್ಲಿ ತರಕಾರಿ, ಸೊಪ್ಪು, ಅವರೆ, ತೆಂಗು, ಕನಕಾಂಬರ ಬೆಳೆದಿದ್ದಾರೆ.
2017ರಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿದ್ದು, ನೀರಿನ ಸಂಪರ್ಕ ಪಡೆದಿದ್ದಾರೆ. ಇದಕ್ಕೂ ಮೊದಲು ಮಳೆಯಾಶ್ರಿತವಾಗಿ ರಾಗಿ, ಹುರುಳಿ, ಅವರೆ, ಜೋಳ, ತೊಗರಿ ಬೆಳೆಯುತ್ತಿದ್ದರು. ನೀರಾವರಿ ಸೌಲಭ್ಯ ಸಿಕ್ಕಿದ ಬಳಿಕ ತರಕಾರಿ ಮತ್ತು ಪುಷ್ಪಕೃಷಿಗೆ ಮುಂದಾದರು.
25 ಗುಂಟೆ ಜಾಗದಲ್ಲಿ 4 ಸಾವಿರ ಕನಕಾಂಬರ ಗಿಡ ನಾಟಿ ಮಾಡಿದ್ದಾರೆ. ಕೋಳಿ ಗೊಬ್ಬರ, ಸಗಣಿ ಗೊಬ್ಬರವನ್ನು ಹಾಕಿದ್ದು, ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
‘ಕೆಂಪು ಮಿಶ್ರಿತ ಮಣ್ಣು ಕನಕಾಂಬರಕ್ಕೆ ಯೋಗ್ಯವಾಗಿದೆ. ಗಿಡಗಳು ನಾಟಿ ಮಾಡಿದ 3 ತಿಂಗಳಿಗೆ ಹೂವು ಬಿಡಲು ಪ್ರಾರಂಭಿಸುತ್ತವೆ. ಕೃಷಿ ವಿಜ್ಞಾನಿಗಳ ಸಲಹೆಯಂತೆ ಕಾಲಕಾಲಕ್ಕೆ ಔಷಧ, ಗೊಬ್ಬರ ನೀಡುತ್ತಿದ್ದೇನೆ. 15 ದಿನಕ್ಕೊಮ್ಮೆ ಹೂವು ಬಿಡಿಸುತ್ತಿದ್ದು, 15ರಿಂದ 20 ಕೆ.ಜಿ ಸಿಗುತ್ತಿದೆ. ಹಬ್ಬಗಳು ಹಾಗೂ ಮದುವೆ ಕಾರ್ಯಕ್ರಮಗಳ ಅವಧಿಯಲ್ಲಿ ಕೆ.ಜಿ.ಗೆ ₹1 ಸಾವಿರದಿಂದ ₹2 ಸಾವಿರ ದರ ಸಿಗುತ್ತದೆ. ಉಳಿದ ಸಮಯದಲ್ಲಿ ₹300ರಿಂದ ₹500ಕ್ಕೆ ಮಾರಾಟವಾಗುತ್ತದೆ. ₹500 ದರವಿದ್ದರೆ ಬೆಳೆಗೆ ಖರ್ಚು ಮಾಡಿರುವ ಹಣ ಕೈಸೇರುತ್ತದೆ. ಪುಷ್ಪಕೃಷಿಗೆ ಸರ್ಕಾರ ವೈಜ್ಞಾನಿಕ ಬೆಂಬಲ ಘೋಷಿಸಿದರೆ ರೈತರಿಗಾಗುವ ನಷ್ಟವನ್ನು ತಪ್ಪಿಸಬಹುದು’ ಎಂದು ರೈತ ಬಸವನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
‘ವರ್ಷದಲ್ಲಿ ನಾಲ್ಕು ಬ್ಯಾಚ್ಗಳಲ್ಲಿ ಅವರೆ ಬೆಳೆಯುತ್ತೇನೆ. ವಾರಕ್ಕೊಮ್ಮೆ ಅವರೆಕಾಯಿ ಕೀಳುತ್ತೇವೆ. ಒಮ್ಮೆಗೆ 4ರಿಂದ 5 ಕ್ವಿಂಟಲ್ ಸಿಗುತ್ತದೆ. ಸದ್ಯ ಪ್ರತಿ ಕೆ.ಜಿ.ಗೆ ₹40 ದರವಿದೆ. ಸೊಪ್ಪು, ಟೊಮೊಟೊ, ಬದನೆ, ಎಲೆಕೋಸು ಬೆಳೆಯುತ್ತಿದ್ದೇನೆ. 75 ತೆಂಗಿನ ಸಸಿಗಳನ್ನು ಹಾಕಿದ್ದು ಐದು ವರ್ಷಗಳಲ್ಲಿ ಫಲ ನೀಡುತ್ತವೆ. ಪುಷ್ಪಕೃಷಿಯಲ್ಲಿ ಎಲ್ಲ ಖರ್ಚು ವೆಚ್ಚ ಕಳೆದು ವಾರ್ಷಿಕ ₹4 ಲಕ್ಷದಿಂದ ₹5 ಲಕ್ಷ ಹಾಗೂ ಹೈನುಗಾರಿಕೆ, ತರಕಾರಿಯಿಂದ ₹2 ಲಕ್ಷದಿಂದ ₹3 ಲಕ್ಷ ಆದಾಯ ಬರುತ್ತಿದೆ’ ಎಂದು ಹೇಳಿದರು.
ಬಸವನಾಯಕ ಅವರ ಮೊ.ಸಂ. 9538259844.ಗಂಗಾ ಕಲ್ಯಾಣ ಯೋಜನೆಯಿಂದಾಗಿ ಕೊಳವೆಬಾವಿ ಸಂಪರ್ಕ ಸಿಕ್ಕಿತು. ಸಮಗ್ರ ಕೃಷಿಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದೇನೆ. ಬಸವನಾಯಕ ರೈತ ಡಿ.ಸಾಲುಂಡಿ
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ 4 ಸಾವಿರ ಕನಕಾಂಬರ ಗಿಡ ನಾಟಿ ವಾರ್ಷಿಕ ₹8 ಲಕ್ಷ ಆದಾಯ
ಗಂಗಾ ಕಲ್ಯಾಣ ಯೋಜನೆಯಿಂದಾಗಿ ಕೊಳವೆಬಾವಿ ಸಂಪರ್ಕ ಸಿಕ್ಕಿತು. ಸಮಗ್ರ ಕೃಷಿಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದೇನೆ.ಬಸವನಾಯಕ ರೈತ ಡಿ.ಸಾಲುಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.