ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿರುವ ‘ಪಂಚರತ್ನ ರಥಯಾತ್ರೆ’ ಜಿಲ್ಲೆಯನ್ನು ಭಾನುವಾರ ಪ್ರವೇಶಿಸಿದೆ.
ತಿ.ನರಸೀಪುರದಿಂದ ಯಾತ್ರೆ ಆರಂಭವಾಗಿದ್ದು, ಎಲ್ಲೆಡೆಯೂ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು. ರೋಡ್ ಶೋ ನಡೆಸಿದ ತಮ್ಮ ನೆಚ್ಚಿನ ನಾಯಕನನ್ನು ಸಂಭ್ರಮದಿಂದ ಬರಮಾಡಿಕೊಂಡರು. ಇದರೊಂದಿಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತವರಿನಲ್ಲಿ ಜೆಡಿಎಸ್ ಹವಾ ಶುರುವಾಗಿದೆ.
ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಶಾಸಕ ಅಶ್ವಿನ್ಕುಮಾರ್ ಮತ್ತು ಮುಖಂಡರು ಸಾಥ್ ನೀಡಿದರು. ಮಡವಾಡಿ, ಕಾವೇರಿಪುರ, ತಲಕಾಡು, ಮಾದಾಪುರ, ಕುರುಬೂರು, ಮೂಗೂರು, ವಾಟಾಳು, ತಿ.ನರಸೀಪುರ, ಸೋಸಲೆ, ಸಂತೇಮಾಳ ವೃತ್ತದ ಮೂಲಕ ಬನ್ನೂರು ತಲುಪಿತು. ಮಾರ್ಗದುದ್ದಕ್ಕೂ ನೂರಾರು ಕಾರ್ಯಕರ್ತರು ಸ್ವಾಗತ ನೀಡಿದರು.
ಹೂವುಗಳು, ಅನಾನಸ್, ಮೋಸಂಬಿ, ಹೂವು ಮತ್ತು ಮುಸುಕಿನ ಜೋಳ, ಎಲೆಕೋಸು ಮತ್ತು ಹೂಗಳಿಂದ ತಯಾರಿಸಿದ ಹಾರಗಳನ್ನು ಹಾಕಿ ಸಂಭ್ರಮಿಸಿದರು. ಭಾರಿ ಗಾತ್ರದ ಹಾರಗಳನ್ನು ಹಾಕುವುದಕ್ಕಾಗಿ ಕ್ರೇನ್ಗಳು, ಜೆಸಿಬಿಗಳನ್ನು ಬಳಸಿದ್ದು ವಿಶೇಷವಾಗಿತ್ತು. ದಾರಿಯುದ್ದಕ್ಕೂ ಅಭಿಮಾನದ ಹೂಮಳೆಯಲ್ಲಿ ಕುಮಾರಸ್ವಾಮಿ ಸೇರಿದಂತೆ ನಾಯಕರು ಮಿಂದೆದ್ದರು. ಅಲ್ಲಲ್ಲಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಕಟೌಟ್ಗಳನ್ನು ಹಾಕಲಾಗಿತ್ತು.