‘ಕಡಿಮೆ ನೀರಿನ ಪ್ರದೇಶದ ಬೆಳೆ’
ಹಲಸು ಹಬ್ಬವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿ ‘ಹಲಸು ಬೆಳೆಗೆ ಕಡಿಮೆ ನೀರು ಸಾಕು. ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ನೀಡುವ ಬೆಳೆಯಲ್ಲಿ ರೈತರು ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದರು. ‘ಮೌಲ್ಯವರ್ಧನೆಯಿಂದ ಹಲಸಿಗೆ ಬೇಡಿಕೆ ಹೆಚ್ಚಾಗಿದೆ. ಇದು ಪೌಷ್ಟಿಕಾಂಶವುಳ್ಳ ಆಹಾರವಾಗಿರುವುದರಿಂದ ಆರೋಗ್ಯಕ್ಕೂ ಉತ್ತಮ. ಹಿಂದೆ ಹಳ್ಳಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಹಾಗೂ ಕೊಳೆತು ಹೋಗುತ್ತಿದ್ದ ಹಣ್ಣಿಗೆ ಇಂದು ಬೇಡಿಕೆ ಬಂದಿರುವುದು ಸಂತಸದ ವಿಚಾರ’ ಎಂದು ಹೇಳಿದರು. ‘ಹಲಸಿನ ಹಬ್ಬದಂಥ ಕಾರ್ಯಕ್ರಮಗಳಿಂದಾಗಿ ರೈತರೇ ನೇರವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಪರಿಸರದ ಕುರಿತಾದ ಕಾರ್ಯಕ್ರಮದಲ್ಲಿ ರೈತ ಸಂಘವೂ ಜೊತೆಯಾಗುತ್ತದೆ. ಈ ಕಾರ್ಯಕ್ರಮ ಬೆಂಗಳೂರಿನಲ್ಲೂ ನಡೆಯಲಿ’ ಎಂದರು. ‘ಬೀಜದ ನಂಟು’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕೈಲಾಸಮೂರ್ತಿ ರೈತ ಮಹಿಳೆ ಹೇಮಾವತಿ ಇದ್ದರು.