ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣರಾಜ | BJP ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಕೆ, ರಾಮದಾಸ್ ಸಾಥ್

ಚಾಮುಂಡೇಶ್ವರಿ ಬೆಟ್ಟ, ಮಠಕ್ಕೆ ಭೇಟಿ, ಮೆರವಣಿಗೆ
Last Updated 20 ಏಪ್ರಿಲ್ 2023, 12:32 IST
ಅಕ್ಷರ ಗಾತ್ರ

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿ.ಎಸ್. ಶ್ರೀವತ್ಸ ಗುರುವಾರ ನಾಮಪತ್ರ ಸಲ್ಲಿಸಿದರು.

ಪಾಲಿಕೆಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವ ವೇಳೆ ಮುಖಂಡ ತೋಂಟದಾರ್ಯ, ಶಾಸಕ ರಾಮದಾಸ್, ಸಂಸದ ಪ್ರತಾಪ ಸಿಂಹ ಮತ್ತು ಮೇಯರ್‌ ಶಿವಕುಮಾರ್ ಸಾಥ್ ನೀಡಿದರು.

ಇದಕ್ಕೂ ಮುನ್ನ ಮೆರವಣಿಗೆ ಹಾಗೂ ಶಕ್ತಿಪ್ರದರ್ಶನ ನಡೆಯಿತು. ಅಗ್ರಹಾರದ 101 ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರಿ ಮಂದಿ ಪಾಲ್ಗೊಂಡಿದ್ದರು.

ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಟಿ.ಎಸ್. ಶ್ರೀವತ್ಸ, ಹಾಲಿ ಶಾಸಕ ಹಾಗೂ ಈ ಬಾರಿ ಟಿಕೆಟ್‌ ತಪ್ಪಿಸಿಕೊಂಡ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ದೇವಸ್ಥಾನಕ್ಕೆ ಬಂದ ರಾಮದಾಸ್ ಅವರನ್ನು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಗಲ ಮೇಲೆ ಕೂರಿಸಿಕೊಂಡು ಬಂದು ತೆರೆದ ವಾಹನದವರೆಗೆ ಕರೆತಂದರು. ಶಾಸಕ ಎಲ್.ನಾಗೇಂದ್ರ ಮೊದಲಾದವರು ಪಾಲ್ಗೊಂಡಿದ್ದರು. ಮೆರವಣಿಗೆಗೆ ಮೆರುಗು ನೀಡಿದ ವೀರಗಾಸೆ, ನಗಾರಿ, ಡೊಳ್ಳು ಮೊದಲಾದ ಕಲಾತಂಡಗಳ ತಾಳಕ್ಕೆ ಅಭಿಮಾನಿಗಳು ಹೆಜ್ಜೆ ಕುಣಿಯುತ್ತಾ ಸಾಗುತ್ತಾ ಸಂಭ್ರಮಿಸಿದರು.

ಶ್ರೀವತ್ಸ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಎಸ್.ಎ. ರಾಮದಾಸ್ ಮೊದಲಾದವರ ಫೋಟೊಗಳನ್ನು ಹಿಡಿದಿದ್ದುದು ಗಮನಸೆಳೆಯಿತು. ಪಕ್ಷದ ಬಾವುಟಗಳು ರಾರಾಜಿಸಿದವು. ಆ ಮಾರ್ಗದಲ್ಲಿ ವಾಹನಗಳ ದಟ್ಟಣೆ ಉಂಟಾಗಿತ್ತು. ಇದರಿಂದ ದ್ವಿಚಕ್ರವಾಹನ ಸವಾರರು ಹಾಗೂ ವಾಹನ ಚಾಲಕರು ಮತ್ತು ಜನರು ತೊಂದರೆ ಅನುಭವಿಸಿದರು.

ಇದಕ್ಕೂ ಮುನ್ನ, ಅಭ್ಯರ್ಥಿ ಶ್ರೀವತ್ಸ ಚಾಮುಂಡೇಶ್ವರಿ ದೇವಸ್ಥಾನಕ್ಕೆ, ಶಂಕರ ಮಠಕ್ಕೆ, ಉತ್ತರಾದಿಮಠಕ್ಕೆ, ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಯರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

‘ರಾಮದಾಸ್ ಕನಸು ನನಸಿಗೆ ಶ್ರಮಿಸುವೆ’

‘ಶಾಸಕ ರಾಮದಾಸ್ ಅವರ ಕನಸುಗಳನ್ನು ಈಡೇರಿಸಲು ನಾನು ಶ್ರಮಿಸುತ್ತೇನೆ’ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ತಿಳಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ‘ಸ್ಪರ್ಧೆ ನನಗೆ ಮೊದಲ ಬಾರಿಯಾದರೂ ಸಾರಥಿಯಾಗಿ 17 ಚುನಾವಣೆಗಳನ್ನು ಮಾಡಿದ್ದೇನೆ. ಕಾರ್ಯಕರ್ತರು ಎಲ್ಲಿದ್ದಾರೆ, ಯಾವ ರೀತಿ ಅವರನ್ನು ಭೇಟಿಯಾಗಬೇಕು, ಸರ್ಕಾರದ ಸಾಧನೆಯನ್ನು ಹೇಗೆ ಮನವರಿಕೆ ಮಾಡಿಕೊಡಬೇಕು ಎಂಬುದು ತಿಳಿದಿದೆ’ ಎಂದರು.

‘ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಲಿದ್ದೇವೆ. ಹೀಗಾಗಿ ರಾಮದಾಸ್, ಶ್ರೀವತ್ಸ ತಂಡ ಎಂಬುದಿಲ್ಲ. ರಾಮದಾಸ್ ಅವರಿಗೆ ಟಿಕೆಟ್ ಸಿಗದಿದ್ದರಿಂದ ಸಹಜವಾಗಿ ಅವರ ಬೆಂಬಲಿಗರಲ್ಲಿ ಸ್ವಲ್ಪ ಬೇಸರವಿತ್ತು. ಈಗ ಎಲ್ಲವೂ ಬಗೆಹರಿದಿದೆ’ ಎಂದು ಹೇಳಿದರು.

‘ರಾಮದಾಸ್, ಮುಖಂಡ ಎಚ್‌.ವಿ. ರಾಜೀವ್ ಹಾಗೂ ಅಸಂಖ್ಯಾತ ಕಾರ್ಯಕರ್ತರು ರೂವಾರಿಗಳಾಗಿ ಕೆಲಸ ಮಾಡಲಿದ್ದಾರೆ. ರಾಜೀವ್ ಅವರು ಅನ್ಯಕಾರ್ಯದಲ್ಲಿದ್ದಿದ್ದರಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT