ಎಚ್.ಎಸ್.ಸಚ್ಚಿತ್
ಹುಣಸೂರು (ಮೈಸೂರು): ತಾಲ್ಲೂಕಿನ ಕುಪ್ಪೆ ಗ್ರಾಮದ ರೈತ ಸಹೋದರರಾದ ನಾಗೇಶ ಮತ್ತು ಕೃಷ್ಣ ಟೊಮೊಟೊ ಕಣ್ಗಾವಲಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ.
‘ಎಂಟು ಎಕರೆ ಜಮೀನಿನಲ್ಲಿ ಮೂರೂವರೆ ಎಕರೆ ಟೊಮೊಟೊ ಬೆಳೆದಿದ್ದೇವೆ. ಇತ್ತೀಚೆಗೆ, ಕಳವು ಮಾಡಲು ಬಂದಿದ್ದ ಇಬ್ಬರನ್ನು ಬಿಳಿಕೆರೆ ಪೊಲೀಸರಿಗೆ ಒಪ್ಪಿಸಿದ್ದೆವು. ವಾರದ ಹಿಂದೆ 2 ಸಿಸಿಟಿವಿ ಕ್ಯಾಮರಾಗಳನ್ನು ಹಾಕಿಸಿದ್ದು, ಮೊಬೈಲ್ ಫೋನ್ಗೆ ಕನೆಕ್ಟ್ ಮಾಡಿಕೊಂಡಿದ್ದೇವೆ’ ಎಂದು ರೈತ ನಾಗೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಈಗ ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಆರ್ಥಿಕವಾಗಿ ಲಾಭವಾಗಿದೆ. ಕೇರಳದವರು ಜಮೀನಿಗೇ ಬಂದು ಎಪಿಎಂಸಿ ದರ ನೀಡಿ ಖರೀದಿಸುತ್ತಿದ್ದಾರೆ. ಸ್ಥಳೀಯ ವಾತಾವರಣಕ್ಕೆ ಹೊಂದುವ ‘ಶಂಕರ್’ ತಳಿ ಟೊಮೆಟೊ (ಎಕರೆಗೆ 10 ಸಾವಿರ ಸಸಿ) ನಾಟಿ ಮಾಡಿ ಹನಿ ನೀರಾವರಿ ಪದ್ಧತಿಯಲ್ಲಿ ಬೇಸಾಯ ಮಾಡಿದ್ದೇವೆ. ಈವರೆಗೆ 15 ಬಾರಿ ಕಟಾವು ಮಾಡಿದ್ದೇವೆ. ಪ್ರತಿ ಕೆ.ಜಿಗೆ ಸರಾಸರಿ ₹ 70ರಿಂದ 75ಕ್ಕೆ ಮಾರಿದ್ದೇವೆ. ಈವರೆಗೆ ₹ 4 ಲಕ್ಷ ಸಿಕ್ಕಿದೆ. ಆಗಸ್ಟ್ನಲ್ಲಿ ಮತ್ತೆ ನಾಟಿ ಮಾಡಲಿದ್ದೇವೆ’ ಎಂದರು.
ಈ ಸಹೋದರರು ಕೃಷಿಗೆ ಸೊಸೈಟಿ ಅಥವಾ ಬ್ಯಾಂಕ್ ಸಾಲಕ್ಕೆ ಕೈ ಚಾಚಿಲ್ಲ. ಕೃಷಿಯಿಂದ ಗಳಿಸಿದ ಲಾಭದಲ್ಲೇ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಪುಟ್ಟ ಮನೆ ನಿರ್ಮಿಸಿಕೊಂಡಿದ್ದಾರೆ. 24 ಆಡು, 12 ಜಾನುವಾರು ಸಾಕುತ್ತಿದ್ದಾರೆ. ಸಾವಯವ ಮತ್ತು ರಾಸಾಯನಿಕ– ಎರಡೂ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.