ಮೈಸೂರು: ಮುಜರಾಯಿ ದೇವಾಲಯಗಳಲ್ಲಿ ಅರ್ಚಕರ ಹುದ್ದೆಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ‘ಆಗಮ ಪ್ರವರ’ ಹಾಗೂ ‘ಆಗಮ ಪ್ರವೀಣ’ ಪರೀಕ್ಷೆಯನ್ನು ನಡೆಸಲು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯು ತಾಳಿರುವ ವಿಳಂಬ ಧೋರಣೆಯು ವಿದ್ಯಾರ್ಥಿಗಳಿಗೆ ತೊಡಕಾಗಿ ಪರಿಣಮಿಸಿದೆ.
ಇಲ್ಲಿ ಮನ್ಮಹಾರಾಜ ಸಂಸ್ಕೃತ ಮಹಾವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿಯುತ್ತಿರುವ 3ನೇ ಹಾಗೂ 5ನೇ ವರ್ಷದ ವಿದ್ಯಾರ್ಥಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯು ಪರೀಕ್ಷೆ ನಡೆಸುತ್ತದೆ. ಅದರಲ್ಲಿ ತೇರ್ಗಡೆಯಾದವರು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆ ನಡೆಯದ ಕಾರಣ ಆಕಾಂಕ್ಷಿಗಳು ತೊಂದರೆ ಅನುಭವಿಸುವಂತಾಗಿದೆ.
ಮೂಲಗಳ ಪ್ರಕಾರ, 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಪರೀಕ್ಷೆಗೆ ಕ್ರಮ ಕೈಗೊಳ್ಳುವಂತೆ ಸಂಸ್ಕೃತ ಪಾಠಶಾಲೆಗಳ ಪ್ರಾಂಶುಪಾಲರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಕಾಯುತ್ತಿದ್ದಾರೆ: ‘ಕೋವಿಡ್–19 ಸಂದರ್ಭದಲ್ಲಿ ಮೂರು ವರ್ಷ ಪರೀಕ್ಷೆ ನಡೆದಿರಲಿಲ್ಲ. 2022ರ ಜೂನ್ನಲ್ಲಿ ಪರೀಕ್ಷೆ ನಡೆಸಿ 2023ರ ಜೂನ್ನಲ್ಲಿ ಅಂಕಪಟ್ಟಿಗಳನ್ನು ಕೊಡಲಾಯಿತು. 2022–23ನೇ ಸಾಲಿನ ಪರೀಕ್ಷೆ ಏಪ್ರಿಲ್–ಮೇನಲ್ಲೇ ಮುಗಿಯಬೇಕಿತ್ತು. ಆದರೆ, ಆಗಸ್ಟ್ ಬಂದರೂ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. 3ನೇ ವರ್ಷದವರು ಹಾಗೂ 5ನೇ ವರ್ಷದವರು ಪಬ್ಲಿಕ್ ಪರೀಕ್ಷೆಗೆ ಕಾದಿದ್ದಾರೆ’ ಎಂದು ನಗರದ ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಪಿ.ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರೀಕ್ಷಾ ಸಮಿತಿ ರಚಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಇಲ್ಲಿಯವರೆಗೂ ಕ್ರಮವಾಗಿಲ್ಲ. ಮಹಾರಾಜ ಸಂಸ್ಕೃತ ಪಾಠಶಾಲೆ, ಸುತ್ತೂರು ಮಠ, ಗಣೇಶ ಸಂಸ್ಕೃತ ಶಾಲೆ, ಪರಕಾಲಮಠ, ಮಲೆಮಹದೇಶ್ವರ ಬೆಟ್ಟದ ಸಂಸ್ಕೃತ ಪಾಠಶಾಲೆ ಮೊದಲಾದವುಗಳಿಗೆ ಮೈಸೂರಿನ ಸಂಸ್ಕೃತ ಪಾಠಶಾಲೆಯ ಕೇಂದ್ರದಲ್ಲಿ, ಆದಿಚುಂಚನಗಿರಿ ಕಾಲಭೈರವೇಶ್ವರ ಸಂಸ್ಕೃತ ಕಾಲೇಜು, ಸಿದ್ಧಗಂಗಾ ಮಠದ ಕೇಂದ್ರ, ಬಾಳೇಹೊನ್ನೂರು ಕೇಂದ್ರ, ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ದೇವಸ್ಥಾನದ ಅರ್ಚಕರ ನೇಮಕಾತಿಗೆ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗುತ್ತದೆ. ಈ ಪ್ರಮಾಣಪತ್ರ ಬೇಕಾಗುತ್ತದೆ’ ಎನ್ನುತ್ತಾರೆ ಅವರು.
ಸ್ಪಂದನೆ ಸಿಕ್ಕಿಲ್ಲ: ‘ನಮ್ಮ ಪಾಠಶಾಲೆಯೊಂದರಲ್ಲೇ 200 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗಿದೆ. ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರು ಪರೀಕ್ಷಾ ಮಂಡಳಿಯ ಕಾರ್ಯದರ್ಶಿಯೂ ಆಗಿರುತ್ತಾರೆ. ಪರೀಕ್ಷೆ ನಡೆಸಲು ನಮಗೇ ಅವಕಾಶ ಕೊಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ 2–3 ಬಾರಿ ಪತ್ರ ಬರೆದಿದ್ದೇನೆ. ಎರಡೇ ತಿಂಗಳಲ್ಲಿ ಪರೀಕ್ಷೆ, ಮೌಲ್ಯಮಾಪನ ಮುಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೇನೆ. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ’ ಎಂದು ತೋಡಿಕೊಂಡರು.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
1,500 ವಿದ್ಯಾರ್ಥಿಗಳಿಗೆ ತೊಂದರೆ ಅರ್ಚಕರಾಗಲು ಈ ಪರೀಕ್ಷೆ ಪಾಸಾಗಬೇಕು ಇಲಾಖೆಯಿಂದ ಕ್ರಮ ಕೈಗೊಂಡಿಲ್ಲ: ದೂರು
ಪರೀಕ್ಷೆ ಜರುಗದೇ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಬೇರೆ ವಿದ್ಯೆಗೆ ಹೋಗುತ್ತಿದ್ದಾರೆ. ಅರ್ಚಕ ವೃತ್ತಿಯಿಂದಲೇ ದೂರವಾಗುವ ಸ್ಥಿತಿ ಎದುರಾಗಿದೆಪಿ.ಸತ್ಯನಾರಾಯಣ ಪ್ರಾಂಶುಪಾಲ ಮಹಾರಾಜ ಸಂಸ್ಕೃತ ಪಾಠಶಾಲೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.