ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಬೆಂಕಿ ನಂದಿಸಲು ಸಂಚಾರಿ ತಂಡಗಳ ನಿಯೋಜನೆ

ಸತೀಶ್ ಬಿ. ಆರಾಧ್ಯ
Published 5 ಜನವರಿ 2024, 7:10 IST
Last Updated 5 ಜನವರಿ 2024, 7:10 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಬೆಂಕಿ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಬೆಂಕಿ ಕಾಣಿಸಿಕೊಳ್ಳುವ ಸ್ಥಳಕ್ಕೆ ಕೂಡಲೇ ಧಾವಿಸಿ ನಂದಿಸುವ ಕಾರ್ಯಾಚರಣೆಗೆ ಈ ಬಾರಿ ಮೊಬೈಲ್ ಫೈರ್ ಪ್ರೊಟೆಕ್ಷನ್ ತಂಡದ ಜೊತೆಗೆ ಇನ್ನೂ ಎರಡು ವಿಶೇಷ ತಂಡಗಳನ್ನು ನಿಯೋಜಿಸಿದೆ.

‘ಕಾಡಿಗೆ ಬೆಂಕಿ ಬಿದ್ದ ತಕ್ಷಣ ಒಂದು ಗಂಟೆಯೊಳಗೆ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಗುರುತಿಸಿ ನಂದಿಸುವ ಕಾರ್ಯ ಆರಂಭಿಸಬೇಕು. ತಡವಾಗಿ ತೆರಳಿದರೆ ಬೆಂಕಿ ನಿಯಂತ್ರಣಕ್ಕೆ ಸಿಗುವುದಿಲ್ಲ. ಅಪಾರ ಪ್ರಮಾಣದ ಕಾಡಿನ ಸಂಪತ್ತು ನಾಶವಾಗುತ್ತದೆ. ಹೀಗಾಗಿ ಈ ಬಾರಿ ಅರಣ್ಯ ಇಲಾಖೆ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಶೀಘ್ರವಾಗಿ ತೆರಳಿ ಕಾರ್ಯಾಚರಣೆ ಆರಂಭಿಸಲು ಸ್ಟ್ರಾಟಿಕ್ ಮೊಬೈಲ್ ಫೈರ್ ಪ್ರೊಟೆಕ್ಷನ್ ತಂಡವನ್ನು ರಚಿಸಿದೆ. ಬೆಂಕಿ ವೀಕ್ಷಣಾ ತಂಡ, ಬೆಂಕಿ ನಂದಿಸುವ ಸಂಚಾರ ತಂಡವನ್ನೂ ರಚಿಸಲಾಗಿದೆ’ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

‘ಅರಣ್ಯ ಸಿಬ್ಬಂದಿ, 8ರಿಂದ 10 ವಾಚರ್‌ಗಳಿರುವ ಸ್ಟ್ರಾಟಿಕ್ ಫೈರ್ ಪ್ರೊಟೆಕ್ಷನ್ ತಂಡಗಳು ಬೀಡುಬಿಟ್ಟಿದ್ದು, ಅರಣ್ಯದ ವಲಯವಾರು ಜಾಗದಲ್ಲಿ ಕ್ಯಾಂಪ್ ಹಾಕಿಕೊಂಡು ಸಸ್ಯಸಂಪತ್ತು, ವನ್ಯಜೀವಿಗೆ ಹಾನಿ ಆಗದಂತೆ ನಿಗಾವಹಿಸುತ್ತಿವೆ. ಕಾಡಿನಲ್ಲಿರುವ ವಾಚ್ ಟವರ್‌ಗಳಲ್ಲಿರುವ ಸಿಬ್ಬಂದಿ, ಆರಣ್ಯದಲ್ಲಿ ಬೆಂಕಿ ಬಿದ್ದರೆ, ಹೊಗೆಯಾಡುತ್ತಿದ್ದರೆ ಅದರ ಮಾಹಿತಿಯನ್ನು ನೀಡುತ್ತಾರೆ. ಅದನ್ನು ಆಧರಿಸಿ ಬೆಂಕಿ ಬಿದ್ದ ಸ್ಥಳಕ್ಕೆ ಕೂಡಲೇ ತೆರಳಿ ಕಾರ್ಯಾಚರಣೆ ಆರಂಭಿಸುತ್ತಾರೆ’ ಎಂದು ಮೇಟಿಕುಪ್ಪೆ ವನ್ಯಜೀವಿ ಉಪ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಹೇಳಿದರು.

ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸುವ ಪ್ರಾಯೋಗಿಕ ಕಾರ್ಯಾಚರಣೆಯನ್ನು ಅರಣ್ಯ ಸಿಬ್ಬಂದಿ ನಡೆಸಿದರು
ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸುವ ಪ್ರಾಯೋಗಿಕ ಕಾರ್ಯಾಚರಣೆಯನ್ನು ಅರಣ್ಯ ಸಿಬ್ಬಂದಿ ನಡೆಸಿದರು
ಭರತ್ ತಳವಾರ್
ಭರತ್ ತಳವಾರ್
700 ಕಿ.ಮೀ. ಬೆಂಕಿರೇಖೆ ನಿರ್ಮಾಣ
‘ಜ.14ರಿಂದ ಮಾರ್ಚ್‌ವರೆಗೆ ಅಂತರಸಂತೆ ವಲಯ ಅರಣ್ಯ ವ್ಯಾಪ್ತಿಗೆ 40 ಆದಿವಾಸಿ ಜನರನ್ನು ಕರ್ತವ್ಯಕ್ಕೆ ಆಯ್ಕೆ ಮಾಡಲಾಗುವುದು. ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ 230 ಕಿ.ಮೀ. ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ 470 ಕಿ.ಮೀ. ಬೆಂಕಿರೇಖೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ’ ಎಂದು ಅಂತರಸಂತೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಭರತ್ ತಳವಾರ್ ತಿಳಿಸಿದರು.
ಪ್ರತಿ ವಲಯಕ್ಕೆ 2 ವೀಕ್ಷಣಾ ಗೋಪುರ
‘ಅರಣ್ಯದೊಳಗೆ ಆಯಾ ವಲಯಕ್ಕೆ 1 ಅಥವಾ 2 ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಪ್ರತಿ ವಲಯದಲ್ಲೂ ಒಂದೊಂದು ವಾಹನ ನಿಯೋಜಿಸಲಾಗಿದೆ. ಸಿಬ್ಬಂದಿಯನ್ನು ಕರೆದೊಯ್ಯಲು ಆಹಾರ ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸಲು ಮೊಬೈಲ್ ಫೈರ್ ಪ್ರೊಟೆಕ್ಷನ್ ಕ್ಯಾಂಪ್ ಸಿದ್ಧವಾಗಿರುತ್ತದೆ. ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಬತ್ತುವ ಹಿನ್ನೆಲೆಯಲ್ಲಿ ನೀರು ತುಂಬಿಸಲಾಗುತ್ತಿದೆ’ ಎಂದು ಮೇಟಿಕುಪ್ಪೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಹರ್ಷಿತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT