ಮೈಸೂರು: ನೇಹಾ ಕೊಲೆ ಪ್ರಕರಣ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಗನ್ ಹೌಸ್ ವೃತ್ತದ ಬಳಿ ಶನಿವಾರ ಪ್ರತಿಭಟಿಸಿದರು.
ನಗರ ಕಾರ್ಯದರ್ಶಿ ಐಶ್ವರ್ಯ ಮಾತನಾಡಿ, ‘ಆರೋಪಿಯು ಕಾಲೇಜಿನೊಳಗೆ ತೆರಳಿ ಕೃತ್ಯ ಎಸಗಿರುವುದು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಸೂಚಿಸುತ್ತದೆ. ಹೆಣ್ಣು ಮಕ್ಕಳು ಹೊರಗಡೆ ಓಡಾಡಲೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಪೊಲೀಸ್ ಇಲಾಖೆಯು ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸುವುದರೊಂದಿಗೆ ರಾಜ್ಯದಾದ್ಯಂತ ಎಲ್ಲಾ ಕಾಲೇಜುಗಳ ಆವರಣಗಳಲ್ಲಿ ಮಫ್ತಿಯಲ್ಲಿ ಸಿಬ್ಬಂದಿ ನಿಯೋಜಿಸಬೇಕು. ಹುಡುಗಿಯರಿಗೆ ಕಿರುಕುಳ ನೀಡುವವರಿಗೆ ಎಚ್ಚರಿಕೆ ನೀಡುವ ಕೆಲಸವಾಗಬೇಕು. ಕಾಲೇಜು ಆವರಣದಲ್ಲಿ ಭಯಮುಕ್ತ ವಾತಾವರಣ ನಿರ್ಮಾಣವಾಗಬೇಕು’ ಎಂದು ತಿಳಿಸಿದರು.
ಎಬಿವಿಪಿ ವಿಭಾಗ ಸಂಚಾಲಕ ಎಂ.ಶಿವು, ಜಿಲ್ಲಾ ಸಂಚಾಲಕ ಪ್ರಜ್ವಲ್, ಕಾರ್ಯಕರ್ತರಾದ ತ್ರಿವೇಣಿ, ಯಶಸ್ವಿನಿ, ದೀಪಿಕಾ, ಪೂಜಾ, ನಮೃತಾ, ಪ್ರೀತಮ್, ಆದರ್ಶ್, ಅಭಿಜ್ಞಾ, ಕಾರ್ತಿಕ್, ಗೌರವ್ ಇದ್ದರು.