ನಂಜನಗೂಡು: ತಾಲ್ಲೂಕಿನ ಹೆಡಿಯಾಲ ಸಮೀಪದ ಈರೇಗೌಡನಹುಂಡಿ ಬಳಿ ಶುಕ್ರವಾರ ಖಾಸಗಿ ಸರಕು ಸಾಗಾಣೆ ವಾಹನ ಪಲ್ಟಿಯಾಗಿದ್ದು, ಅದರಲ್ಲಿದ್ದ 9 ಮಂದಿ ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಬಳ್ಳೂರು ಹುಂಡಿ, ನಾಗಣಾಪುರ ಹಾಗೂ ಮಹದೇವನಗರದಿಂದ ಹೆಡಿಯಾಲ ಗ್ರಾಮದ ಶಾಲೆಗೆ ತೆರಳಲು 9 ಮಂದಿ ವಿದ್ಯಾರ್ಥಿಗಳು ಡೇರಿಯ ಹಾಲು ಸರಬರಾಜು ಮಾಡುವ ಟೆಂಪೊ ವಾಹನ ಏರಿದ್ದರು.
ಸರಕು ಸಾಗಾಣೆ ವಾಹನ ಈರೇಗೌಡನಹುಂಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಅಂಚಿಗೆ ಉರುಳಿ ಬಿದ್ದಿದ್ದರಿಂದ ವಾಹನದಲ್ಲಿದ್ದ ಅನು, ಬೇಬಿ, ಮಿಲನ, ಕೌಶಲ್ಯ, ಅಂಜಲಿ, ಕುಮಾರಿ, ವಿನೋದ, ಸೋಮಣ್ಣ ಹಾಗೂ ಮಣಿಕಂಠ ಎಂಬ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಇದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಬಳ್ಳೂರುಹುಂಡಿಯ ನಿವಾಸಿಗಳಾದ ಉದಯ್ ಹಾಗೂ ಮಹೇಶ ಎಂಬುವವರೂ ಸಹ ಗಾಯವಾಗಿದೆ.
ಸ್ಥಳೀಯರು ತಕ್ಷಣ ತುರ್ತು ವಾಹನದಲ್ಲಿ ಗಾಯಾಳುಗಳನ್ನು ಹೆಡಿಯಾಲ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟೆ ಮಹಜರು ನಡೆಸಿ ಅಪಘಾತಕ್ಕೀಡಾಗಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಹೆಡಿಯಾಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದ ಶಾಲಾ ವಿದ್ಯಾರ್ಥಿನಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ವಿಚಾರಿಸಿದರು