ಮೈಸೂರು: ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.
ಕಚೇರಿ ಮುಂಭಾಗ ಸೇರಿದ ನೂರಾರು ಉಪನ್ಯಾಸಕರು, ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು.
ಸಂಘದ ಡಿ.ನಾಗಾರ್ಜುನ ಮಾತನಾಡಿ, ‘ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಡಿಮೆ ವೇತನದ ಜೊತೆಗೆ ಯಾವುದೇ ಭದ್ರತೆಯಿಲ್ಲದಿದ್ದರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೂ ನಮ್ಮ ಪರವಾದ ಯಾವುದೇ ನಿರ್ಧಾರಗಳನ್ನು ಇಲಾಖೆ ಕೈಗೊಂಡಿಲ್ಲ’ ಎಂದು ದೂರಿದರು.
‘ಅನೇಕ ಅತಿಥಿ ಉಪನ್ಯಾಸಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಯಾವುದೇ ಜೀವನ ಭದ್ರತೆಯಿಲ್ಲದೆ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗೌರವತಯುತವಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಾದರೂ ನಮ್ಮನ್ನು ಈ ಆಧುನಿಕ ಜೀತ ಪದ್ಧತಿಯಿಂದ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಜಿ.ವಿ.ರಮೇಶ್, ಉಪಾಧ್ಯಕ್ಷ ಕೆ.ಎಸ್.ಯಶುಪಾಲ್, ಎಸ್.ಪರಮೇಶ್, ಬಲರಾಮ್, ಪಿ.ಆರ್.ಸವಿತಾ, ಕಾರ್ಯದರ್ಶಿ ಕೆಂಪನಂಜಪ್ಪ, ಎಂ.ಸಿ.ವಿನಾಯಕ, ಪೂರ್ಣಿಮಾ, ಆಶಲತಾ, ಡಾ.ವೆಂಕಟೇಶ್ ಇದ್ದರು.