ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಮಳೆ ಬಿದ್ದಿತು. ಹಲವೆಡೆ ತುಂತುರು, ಜಿಟಿಜಿಟಿ ಹಾಗೂ ಕೆಲವೆಡೆ ಸಾಧಾರಣ ಮಳೆಯಾಯಿತು.
ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಶೀತ ಗಾಳಿ ಬೀಸುತ್ತಿತ್ತು. ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ, ನಗುವನಹಳ್ಳಿ ಭಾಗದಲ್ಲಿ ತಾಸಿಗೂ ಹೆಚ್ಚು ಕಾಲ ಜೋರು ಮಳೆ ಬಿತ್ತು. ರಕ್ಷಣೆ ಪಡೆಯಲು ಬಹಳಷ್ಟು ದ್ವಿಚಕ್ರವಾಹನ ಸವಾರರು ನಗುವನಹಳ್ಳಿ ಗೇಟ್ ಅಂಡರ್ಪಾಸ್ನಲ್ಲಿ ನಿಂತಿದ್ದರು.
ಪಿರಿಯಾಪಟ್ಟಣ, ನಂಜನಗೂಡು ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ಆಗಾಗ ತುಂತುರು ಮಳೆ ಬಿತ್ತು. ಧರ್ಮಪುರದಲ್ಲೂ ಇದೇ ಸ್ಥಿತಿ ಇತ್ತು.