ಅಸ್ಪೃಶ್ಯತೆ ಇಂದಿಗೂ ಹೋಗಿಲ್ಲ; ಕೀಳರಿಮೆಯೂ ನಿವಾರಣೆಯಾಗಿಲ್ಲ. ಸುಶಿಕ್ಷಿತರ ನಡುವೆಯೂ ಅಸಮಾನತೆ ಇದೆ. ಶೋಷಿತ ಸಮಾಜದ ನ್ಯಾಯಾಧೀಶರನ್ನು ಅಭಿನಂದಿಸುವುದಕ್ಕೂ ಹಿಂಜರಿಯುವುದು ಕಂಡುಬರುತ್ತಿದೆ
ರವಿವರ್ಮ ಕುಮಾರ್ ಮಾಜಿ ಅಧ್ಯಕ್ಷ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ
ಮೀಸಲಾತಿ ಏಕೆ ಬೇಕು?
‘ಮೀಸಲಾತಿ ಕೊಡಬೇಕೇಕೆ? ಇವರಿಗೆ ಇದುವರೆಗೂ ಅಧಿಕಾರದಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ ಹಾಗೂ ವಿಶೇಷವಾಗಿ ಸರ್ಕಾರಿ ಸೇವೆಯಲ್ಲಿ ದೊರೆತಿಲ್ಲ ಎಂಬ ಕಾರಣಕ್ಕೆ ಕೊಡಬೇಕು’ ಎಂದು ರವಿವರ್ಮ ಕುಮಾರ್ ಹೇಳಿದರು. ‘1872ರ ಮೊದಲ ಜನಗಣತಿ ನಡೆದಾಗ ಆ ಪ್ರಕಾರ ಬ್ರಾಹ್ಮಣರು ಶೇ 3ರಷ್ಟು ಮಾತ್ರವೇ ಇದ್ದಾರೆ ಎಂಬುದು ತಿಳಿದುಬಂದಿತು. ಅಲ್ಲಿವರೆಗೂ ಎಲ್ಲ ರಂಗದಲ್ಲೂ ಅವರೇ ಮುಂದೆ ಇದ್ದಿದ್ದರಿಂದ ಅವರ ಜನಸಂಖ್ಯೆ ಜಾಸ್ತಿ ಇರಬಹುದೆಂದು ಎಲ್ಲರೂ ಭಾವಿಸಿದ್ದರು. ಇದಾಗಿ ಎರಡು ವರ್ಷಗಳ ತರುವಾಯ ಅಂದರೆ 1874ರಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಯನ್ನು ಪರಿಚಯಿಸಲಾಯಿತು. ಮೊದಲಿಗೆ ಪೊಲೀಸ್ ಅಧಿಕಾರಿಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಲಾಗಿತ್ತು. ಈಗಲೂ ವರ್ಗೀಕರಣ ವಿಷಯದಲ್ಲಿ ಕರ್ನಾಟಕವೇ ಮುಂದಡಿ ಇಡಬೇಕು’ ಎಂದು ಆಶಿಸಿದರು.