ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಣಜಿ’ಯಲ್ಲಿ ಮೈಸೂರಿನ ಮೂವರು!

Published 5 ಜನವರಿ 2024, 7:16 IST
Last Updated 5 ಜನವರಿ 2024, 7:16 IST
ಅಕ್ಷರ ಗಾತ್ರ

ಮೈಸೂರು: ಕೆಎಸ್‌ಸಿಎ ರಣಜಿ ಟ್ರೋಫಿ ತಂಡದಲ್ಲಿ ಅರಮನೆ ನಗರಿಯ ಮೂವರು ಸ್ಥಾನ ಪಡೆದಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಅಂಗಳದಲ್ಲಿ ಅಭ್ಯಾಸ ನಡೆಸಿದ್ದಾರೆ.

ನಗರದ ಎಸ್‌.ಜೆ.ನಿಕಿನ್ ಜೋಸ್‌ ಉಪನಾಯಕರಾದರೆ, ಎಂ.ವೆಂಕಟೇಶ್‌ ಹಾಗೂ ಕಿಶನ್‌ ಎಸ್‌.ಬೇದ್ರೆ ಸ್ಥಾನ ಪಡೆದಿದ್ದಾರೆ. ಇಂದಿನಿಂದ (ಡಿ.5) ಹುಬ್ಬಳ್ಳಿಯ ದ.ರಾ.ಬೇಂದ್ರೆ ಕ್ರಿಕೆಟ್‌ ಮೈದಾನದಲ್ಲಿ ಪಂಜಾಬ್ ವಿರುದ್ಧ ರಣಜಿ ಟ್ರೋಫಿ ಪಂದ್ಯ ಆರಂಭವಾಗಲಿದ್ದು, ಪ್ರತಿಭೆಯನ್ನು ಮೆರೆಯಲಿದ್ದಾರೆ.

ಅಂಗಳಕ್ಕಿಳಿದ ಗಾಯಕ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಎಂ.ವೆಂಕಟೇಶ್‌ ಆಸಕ್ತಿ ಹೊರಳಿದ್ದು ಕ್ರಿಕೆಟ್‌ ಕಡೆಗೆ.

ಅಜ್ಜಿ ಹಾಗೂ ತಾಯಿ ಶಾಸ್ತ್ರೀಯ ಗಾಯಕರು. ಅವರಲ್ಲಿಯೇ ತರಬೇತಿ ಪಡೆದು ಜ್ಯೂನಿಯರ್‌ ಪರೀಕ್ಷೆಯನ್ನೂ ಪಾಸು ಮಾಡಿದ್ದರು. ಇದೀಗ ರಾಜ್ಯ ತಂಡದ ಎಡಗೈ ಬ್ಯಾಟರ್‌, ಬಲಗೈ ಮಧ್ಯಮ ವೇಗದ ಬೌಲರ್‌ ಆಗಿದ್ದಾರೆ.

ನಗರದ ವಿಜಯನಗರ 3ನೇ ಹಂತದ ನಿವಾಸಿ ದಾಕ್ಷಾಯಿಣಿ ಹಾಗೂ ಎಂ.ಮುರಳೀಧರ ದಂಪತಿ ಪುತ್ರ ಎಂ.ವೆಂಕಟೇಶ್‌. ಬನ್ನಿಮಂಟಪದ ಗಲ್ಲಿಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದ ಅವರನ್ನು 3ನೇ ತರಗತಿಯಿಂದಲೇ ಕ್ರಿಕೆಟ್‌ ತರಬೇತಿ ಶಾಲೆಗೆ ಅವರ ತಂದೆ ಸೇರಿಸಿದರು.

‘ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಡಿಎಂಎಸ್‌ ಶಾಲೆಯಲ್ಲಿ ಓದಿದ್ದೇನೆ. ಮೊದಲು ಮನ್ಸೂರ್ ಅಹ್ಮದ್‌ ಅವರಲ್ಲಿ ತರಬೇತಿ ಪಡೆದೆ. ನಂತರ ಸುರೇಂದ್ರ ಅವರಲ್ಲಿ ತರಬೇತಿ ಮುಂದುವರಿಸಿದೆ. ಆಗ ಮೈಸೂರಿಗೆ ಬಂದಿದ್ದ ಕೋಚ್‌ ಲಿಯಾನ್ ಖಾನ್ ಕ್ರೀಡಾ ಜೀವನವನ್ನೇ ಬದಲಿಸಿದರು. ಬೆಂಗಳೂರಿಗೆ ಕರೆದೊಯ್ದು ತರಬೇತಿ ನೀಡಿದರು’ ಎಂದು ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ಗೆ ಆಡುತ್ತಿದ್ದ. 16 ವರ್ಷದೊಳಗಿನ ಪಂದ್ಯವೊಂದರಲ್ಲಿ ಔಟಾಗದೇ 198 ರನ್‌ ಗಳಿಸಿದ್ದ. 2023ರಲ್ಲಿ ಫೆಬ್ರುವರಿಯಲ್ಲಿ ಉತ್ತರಾಖಂಡ ವಿರುದ್ಧದ ರಣಜಿ ತಂಡದಲ್ಲಿ ಸ್ಥಾನಗಿಟ್ಟಿಸಿದ್ದ ವೆಂಕಟೇಶ್‌ ಮೊದಲ ಪಂದ್ಯದಲ್ಲಿಯೇ 5 ವಿಕೆಟ್‌ ಪಡೆದಿದ್ದ. ಈ ಬಾರಿಯೂ ಉತ್ತಮ ಪ್ರದರ್ಶನ ನೀಡಲಿದ್ದಾನೆ’ ಎಂದು ವೆಂಕಟೇಶ್‌ ತಾಯಿ ದಾಕ್ಷಾಯಿಣಿ ಸಂತಸ ಹಂಚಿಕೊಂಡರು.

ಕಿಶನ್‌ ಎಸ್‌.ಬೇದ್ರೆ
ಕಿಶನ್‌ ಎಸ್‌.ಬೇದ್ರೆ
ನಿಕಿನ್ ಜೋಸ್
ನಿಕಿನ್ ಜೋಸ್
ಕಳೆದ ವರ್ಷ ನಡೆದ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಶತಕ ಸಿಡಿಸಿದ್ದ ಎಸ್‌.ಜೆ.ನಿಕಿನ್ ಜೋಸ್ 
ಕಳೆದ ವರ್ಷ ನಡೆದ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಶತಕ ಸಿಡಿಸಿದ್ದ ಎಸ್‌.ಜೆ.ನಿಕಿನ್ ಜೋಸ್ 
ದೇಶ ಪ್ರತಿನಿಧಿಸುವ ಕನಸು
ಕುವೆಂಪುನಗರದ ಕಿಶನ್ ಎಸ್‌.ಬೇದ್ರೆ ಬಲಗೈ ಬ್ಯಾಟರ್‌. ಬೋಗಾದಿಯ ಅಮೃತ ವಿದ್ಯಾಲಯದಲ್ಲಿ 10ನೇ ತರಗತಿವರೆಗೆ ಓದಿದ ನಂತರ ವಿಜಯವಿಠ್ಠಲ ಪಿಯು ಕಾಲೇಜಿನಲ್ಲಿ ಪಿಯು ಸೇಪಿಯಂಟ್‌ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ. ಎರಡು ತಿಂಗಳ ಹಿಂದಷ್ಟೇ ನೈರುತ್ಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಲ್ಲಿ ಉದ್ಯೋಗ ಪಡೆದಿದ್ದಾರೆ. ‌ ಆರ್‌.ಎಸ್‌.ಬೇದ್ರೆ– ವೀಣಾ ಎಸ್‌.ಬೇದ್ರೆ ದಂಪತಿ ಪುತ್ರ ಕಿಶನ್‌ ಮಾನಸಗಂಗೋತ್ರಿ ಗೌತಮ್‌ ಹಾಸ್ಟೆಲ್‌ ಮೈದಾನದಲ್ಲಿ ನಡೆಯುತ್ತಿದ್ದ ‘ನ್ಯಾಷನಲ್‌ ಕ್ರಿಕೆಟ್‌ ಕ್ಲಬ್‌’ನಲ್ಲಿ 7 ವರ್ಷ ಆಗಿದ್ದಾಗಿನಿಂದಲೂ ತರಬೇತಿ ಪಡೆದಿದ್ದಾರೆ. ಕ್ಲಬ್‌ನ ಹರಿಕೃಷ್ಣ ಅವರ ಕೋಚ್‌. ಅವರೀಗ ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕರಾಗಿದ್ದಾರೆ. ‘16 ವರ್ಷದೊಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಅವರು ರನ್‌ ಹೊಳೆ ಹರಿಸಿದ್ದರು. 25 ವರ್ಷದೊಳಗಿನವರ ತಂಡದ ನಾಯಕರಾಗಿ ನಾಲ್ಕು ಪಂದ್ಯಗಳಲ್ಲಿ 500 ರನ್‌ ವೈಯಕ್ತಿಕ ಕಾಣಿಕೆ ನೀಡಿದ್ದರು. ಗಾಯದಿಂದ 7 ತಿಂಗಳು ವಿಶ್ರಾಂತಿಯಲ್ಲಿದ್ದ ಅವರು 7 ಪಂದ್ಯಗಳಲ್ಲಿ 480 ರನ್‌ ಗಳಿಸಿ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.  ‘2022ರಲ್ಲಿಯೇ ರಣಜಿಗೆ ಆಯ್ಕೆಯಾಗಿದ್ದರೂ ಅಂತಿಮ 11ರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಪಂಜಾಬ್‌ ವಿರುದ್ಧದ ಪಂದ್ಯವೇ ನನ್ನ ಪದಾರ್ಪಣೆ ಪಂದ್ಯವಾಗಲಿದೆ ಎಂಬ ನಿರೀಕ್ಷೆಯಿದೆ’ ಎಂದು ಕಿಶನ್‌ ಹೇಳಿದರು.
ಭರವಸೆಯ ನಿಕಿನ್
ಅರಮನೆ ನಗರಿ ಪ್ರತಿಭೆ ನಿಕಿನ್‌ ಜೋಸ್‌ ಈ ಬಾರಿ ರಣಜಿ ತಂಡದಲ್ಲಿ ಉಪನಾಯಕರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡಿದ್ದರಿಂದ ಅವಕಾಶ ಸಿಕ್ಕಿದೆ. 2022ರ ಡಿ.13ರಂದು ಮೊದಲ ರಣಜಿ ಪಂದ್ಯ ಆಡಿದ್ದ ಅವರು ವಿಜಯ್‌ ಹಜಾರೆ ಟ್ರೋಫಿಗೂ ತಂಡದ ಸ್ಥಾನ ಪಡೆದಿದ್ದರು. ಏಷ್ಯಾ ಕಪ್‌ನ ಭಾರತ ‘ಎ’ ತಂಡವನ್ನೂ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT