ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ನೇ ಪ್ರದರ್ಶನದತ್ತ ‘ಟಿಪ್ಪು ನಿಜಕನಸುಗಳು’

40ಸಾವಿರ ಮಂದಿಯಿಂದ ವೀಕ್ಷಣೆ: ನಿರ್ದೇಶಕ ಅಡ್ಡಂಡ ಮಾಹಿತಿ
Last Updated 11 ಮಾರ್ಚ್ 2023, 7:26 IST
ಅಕ್ಷರ ಗಾತ್ರ

ಮೈಸೂರು: ‘ರಂಗಾಯಣ ಮೈಸೂರು ಪ್ರಸ್ತುತಿಯ ‘ಟಿಪ್ಪು ನಿಜಕನಸುಗಳು’ ನಾಟಕ ಪ್ರಯೋಗ ಭಾರಿ ಯಶಸ್ಸು ಗಳಿಸಿದ್ದು, 50ನೇ ಪ್ರದರ್ಶನದತ್ತ ನುಗ್ಗುತ್ತಿದೆ’ ಎಂದು ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಈವರೆಗೆ ರಾಜ್ಯದ ವಿವಿಧೆಡೆ 46 ಪ್ರದರ್ಶನಗಳನ್ನು ಕಂಡಿದೆ. ಮಾರ್ಚ್‌ 12, 15, 18 ಹಾಗೂ 19ರಂದು ರಂಗಾಯಣದ ಭೂಮಿಗೀತದಲ್ಲಿ ಮುಂದುವರಿಯಲಿದೆ. 50ನೇ ಪ್ರಸ್ತುತಿಯು ಮಾರ್ಚ್‌ 19ರಂದು ನಡೆಯಲಿದೆ. ಅಂದು, ಕಲಾವಿದರು–ತಂತ್ರಜ್ಞರನ್ನು ಗೌರವಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ತಮ್ಮ ರಚನೆಯ ನಾಟಕವನ್ನು ಆರಂಭದ ದಿನಗಳಲ್ಲಿ ಕೆಲವರು ಓದದೆಯೇ ವಿರೋಧಿಸಿ ವಿವಾದದತ್ತ ಸೆಳೆಯಲು ಪ್ರಯತ್ನಿಸಿದ್ದರು. ಈ ನಾಟಕ ಕೃತಿಯನ್ನು ನಿಷೇಧಿಸುವಂತೆ ಕೆಲವರು ನ್ಯಾಯಾಲಯದಲ್ಲಿ ದೂರು ಅರ್ಜಿ ದಾಖಲಿಸಿದ್ದರು. ಬೆಂಗಳೂರು ನಗರ ನ್ಯಾಯಾಲಯವು ಈ ಪ್ರಕಟಿತ ಕೃತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಕೃತಿಯನ್ನು ಪ್ರಕಟಿಸಿದ ಅಯೋಧ್ಯಾ ಪ್ರಕಾಶನ ಸಂಸ್ಥೆ ಮತ್ತು ನಾನು ತಡೆಯಾಜ್ಞೆಯನ್ನು ತೆರವುಗೊಳಿಸಲು ಸಫಲರಾದೆವು. ನ.20ರಂದು ಮೊದಲ ಪ್ರದರ್ಶನ ಕಂಡಿತ್ತು’ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಗೆಲುವು:

‘ನಾಟಕದ ವಿರುದ್ಧ ನ್ಯಾಯಾಲಯದಲ್ಲಿ ದೂರು ಅರ್ಜಿ ಹಾಕಿದ್ದ ದೂರುದಾರರು, ಕೃತಿಕಾರರು ನ್ಯಾಯಾಲಯಕ್ಕೆ ಸಲ್ಲಿಸಿದ ಸಾಕ್ಷಿಗಳನ್ನು ಗಮನಿಸಿ ದೂರು ಅರ್ಜಿಯನ್ನು ವಾಪಸ್ ಪಡೆದರು. ನ್ಯಾಯಾಲಯ ಪ್ರಕಾಶಕರು ಹಾಗೂ ಕೃತಿಕಾರರಿಗೆ ತಲಾ ₹ 3ಸಾವಿರ ಪಾವತಿಸುವಂತೆ ಆದೇಶಿಸಿ ದೂರುದಾರರಿಗೆ ದಂಡ ವಿಧಿಸಿದೆ. ಹೀಗೆ ಟಿಪ್ಪು ನಿಜಕನಸುಗಳು’ ನಾಟಕ ಕೃತಿ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದೆ’ ಎಂದರು.

‘ರಂಗಾಯಣದ ರೆಪರ್ಟರಿ ತಂಡ ಮೂರು ಹಂತದಲ್ಲಿ ರಾಜ್ಯದಾದ್ಯಂತ ಪ್ರದರ್ಶನ ನೀಡಿದೆ. ಮೊದಲ ಹಂತದಲ್ಲಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮಂಗಳೂರು, ಪುತ್ತೂರು, ಪೊನ್ನಂಪೇಟೆ, ಮಂಡ್ಯದಲ್ಲಿ 14 ಪ್ರದರ್ಶನಗಳನ್ನು ಕಂಡಿತು. 2ನೇ ಹಂತದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕಲಬುರಗಿ, ಬೀದರ್, ಬಳ್ಳಾರಿಯಲ್ಲಿ 10, ಮೂರನೇ ಹಂತದಲ್ಲಿ ಕುಶಾಲನಗರ, ತೀರ್ಥಹಳ್ಳಿ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಕೋಲಾರ, ಚಾಮರಾಜನಗರದಲ್ಲಿ 9 ಪ್ರದರ್ಶನಗಳನ್ನು ಕಂಡಿದೆ. ಮೈಸೂರಿನಲ್ಲಿ ಶನಿವಾರದವರೆಗೆ 13 ಪ್ರದರ್ಶನಗಳು ನೀಡಲಾಗಿದೆ’ ಎಂದು ವಿವರಿಸಿದರು.

ಸರ್ಕಾರದಿಂದ ಅನುದಾನ ಸಿಕ್ಕಿಲ್ಲ:

‘ಈ ನಾಟಕ ಕೃತಿ 12ನೇ ಆವೃತ್ತಿ ಮುದ್ರಣವಾಗಿದ್ದು, 20ಸಾವಿರ ಪ್ರತಿಗಳು ಮಾರಾಟವಾಗಿವೆ. 50ಸಾವಿರ ಪ್ರೇಕ್ಷಕರು ನಾಟಕವನ್ನು ಓದಿದ್ದಾರೆ’ ಎಂದರು.

‘ಈ ವಿಶೇಷ ನಾಟಕಕ್ಕೆ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಪ್ರೇಕ್ಷಕರು ಟಿಕೆಟ್ ಖರೀದಿಸಿದ ಹಣದಿಂದಲೇ ಪ್ರದರ್ಶನ ನೀಡಲಾಗುತ್ತಿದೆ. ಸ್ಥಳೀಯ ಸಂಘಟಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದು, ತಂಡದ ವಸತಿ-ಊಟೋಪಹಾರದ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಜಿಲ್ಲಾ ರಂಗಮಂದಿರಗಳಲ್ಲಿ ಪ್ರದರ್ಶನವನ್ನು ನೀಡಲಾಗಿದೆ. ಖರ್ಚು–ವೆಚ್ಚ ಹಾಗೂ ಆದಾಯವನ್ನು ಪರಿಶೀಲಿಸಲಾಗುತ್ತಿದ್ದು, ಮುಂದೆ ವಿವರ ನೀಡಲಾಗುವುದು. 38 ಜನ ನಟರು–ತಂತ್ರಜ್ಞರು ಸೇರಿರುವ ರಂಗಾಯಣ ರೆಪರ್ಟರಿ ತಂಡ ಯಶಸ್ವಿ ರಂಗ ಪ್ರವಾಸ ಮುಗಿಸಿದೆ. ಭಾರತೀಯ ರಂಗಭೂಮಿಯಲ್ಲಿ ಈ ದಶಕದ ಯಶಸ್ವಿ ರಂಗಯಾನ ಇದಾಗಿದೆ’ ಎಂದು ಪ್ರತಿಕ್ರಿಯಿಸಿದರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT