ಮೈಸೂರು: ‘ಮಹಿಳೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ, ಸ್ವಾತಂತ್ರ್ಯ ಮತ್ತು ಸ್ವಚ್ಛಂದದ ನಡುವಿನ ವ್ಯತ್ಯಾಸ ತಿಳಿದು ಮುನ್ನಡೆದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ’ ಎಂದು ವಿದುಷಿ ಕೃಪಾ ಫಡ್ಕೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಉತ್ತಿಷ್ಠ ಭಾರತ ಪ್ರತಿಷ್ಠಾನದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ಮಹಿಳೆ ಮತ್ತು ಪುರುಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರೂ ಅಲ್ಲ. ಈ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ಪುರುಷರಾಗಲಿ, ಮಹಿಳೆಯಾಗಲಿ ನಾವು ಏನೇ ಮಾಡಿದರೂ ಸರಿ ಎನ್ನುವ ಮನೋಭಾವ ಇರಬಾರದು’ ಎಂದರು.
ಸಾಹಿತಿ ಲೀಲಾ ಪ್ರಕಾಶ್ ಮಾತನಾಡಿದರು. ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ ಬಾಬು ರಚಿಸಿದ ‘ಸ್ತ್ರೀ ಶಕ್ತಿ’ ಭಿತ್ತಿಚಿತ್ರವನ್ನು ಬಿಡುಗಡೆ ಮಾಡಲಾಯಿತು. ಸರ್ಮಪಣಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಧಾ ಫಣೀಶ್ ಉಪನ್ಯಾಸ ನೀಡಿದರು.
ಲೇಖಕಿಯರಾದ ಎ.ಪುಷ್ಪಾ ಅಯ್ಯಂಗಾರ್, ಕೆ.ಲೀಲಾ ಪ್ರಕಾಶ್, ಉದ್ಯಮಿ ವಿನುತಾ ಎಸ್. ಗಿರಿ, ವೈದ್ಯರಾದ ಪೂರ್ಣಿಮಾ ಹಾಗೂ ಭಾವನಾ ಆರ್.ಮಧುಸೂದನ್ ಅವರಿಗೆ ‘ಅಭಿಜಾತ ಸ್ತ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷ ಎನ್.ಅನಂತ್, ಉತ್ತಿಷ್ಠ ಭಾರತ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ವಿ.ನಾಗೇಂದ್ರ ಬಾಬು, ಸಹ ಕಾರ್ಯದರ್ಶಿ ರಾಕೇಶ್ ಭಟ್, ಲತಾ ಮೋಹನ್ ಪಾಲ್ಗೊಂಡಿದ್ದರು.