ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮತ್ತೆ ಮಳೆ ಸುರಿದಿದ್ದು, ಗ್ರಾಮೀಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾಪಕದಲ್ಲಿ ಸರಾಸರಿ 16 ಮಿಲಿಮೀಟರ್ ದಾಖಲಾಗಿದೆ.
ರಾಯಚೂರು ನಗರದ ವಾರ್ಡ್ ಸಂಖ್ಯೆ 30 ಹಾಗೂ 31 ರ ವ್ಯಾಪ್ತಿಯ ಸಿಯಾತಾಲಾಬ್, ಜಲಾಲನಗರ, ಮಹಾದೇವ ನಗರದ ಮನೆಗಳಿಗೆ ನೀರು ನುಗ್ಗಿದೆ. ಜನರೆಲ್ಲ ಜಾಗರಣೆ ಮಾಡಿದ್ದಾರೆ. ಲಿಂಗಸುಗೂರು ತಾಲ್ಲೂಕು ಹಟ್ಟಿ ಸಮೀಪ ಗುಡಗುಂಟಾದಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ.
ಹಟ್ಟಿ ಸಮೀಪದ ಗುಡದನಾಳ, ಯಲಗಟ್ಟಾ, ಮಾಚನೂರು, ಪೈದೊಡ್ಡಿ, ಗೋಲಪಲ್ಲಿ ಸೇರಿ 15 ಕ್ಕೂ ಅಧಿಕ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಸೇತುವೆಗಳು ಜಲಾವೃತವಾಗಿದ್ದು ಸಂಚಾರ ಪೂರ್ಣ ಬಂದ್ ಆಗಿದೆ.
ಅತಿಹೆಚ್ಚು 33 ಮಿಲಿಮೀಟರ್ ಮಳೆ ಲಿಂಗಸುಗೂರು ತಾಲ್ಲೂಕಿನಲ್ಲಿ ಸುರಿದಿದೆ. ರಾಯಚೂರು ತಾಲ್ಲೂಕಿನಲ್ಲಿ 19 ಮಿಲಿಮೀಟರ್, ಸಿಂಧನೂರು ಮತ್ತು ಸಿರವಾರ ತಾಲ್ಲೂಕುಗಳಲ್ಲಿ 10 ಮಿಲಿಮೀಟರ್, ಮಸ್ಕಿಯಲ್ಲಿ 13, ಮಾನ್ವಿಯಲ್ಲಿ 6 ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ 15 ಮಿಲಿಮೀಟರ್ ಮಳೆಯಾಗಿದೆ.
ಜಿಲ್ಲೆಯಲ್ಲಿ ದಟ್ಟವಾದ ಮೋಡಕವಿದ ವಾತಾವರಣ ಮುಂದುವರಿದಿದ್ದು, ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸುತ್ತಮುತ್ತ ಸೋಮವಾರ ಬಿರುಸಾಗಿ ಮಳೆ ಸುರಿದಿದೆ.