ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಎನ್.ಆರ್.ಸಿ, ಎನ್.ಪಿಆರ್ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ಸಾರ್ವಜನಿಕರು ಸಹಕಾರ ನೀಡದಂತೆ ಒತ್ತಾಯಿಸಿ ತಾಲ್ಲೂಕಿನ ಜುಲುಮಗೇರಾ ಗ್ರಾಮದಲ್ಲಿ ಬುಧವಾರ ಸಿಪಿಐಎಂ ಪಕ್ಷದಿಂದ ಮನೆ ಮನೆ ಪ್ರಚಾರ ಆಂದೋಲನಾ ನಡೆಸಲಾಯಿತು.
ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರಕ್ಕೆ ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೊಳಿಸಲು ಅವಕಾಶ ನೀಡದೇ, ಅಧಿಕಾರಿಗಳ ತಂಡ ಸರ್ವೆಗೆ ಬಂದಾಗ ಅಸಹಕಾರ ತೋರಬೇಕು. ದೇಶದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಸ್ವಿಸ್ ಬ್ಯಾಂಕ್ ಹಣ ವಾಪಸ್ ಬಂದಿಲ್ಲ. ಈ ಕುರಿತು ಪ್ರಶ್ನೆ ಮಾಡಬೇಕು ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಈ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿಗೂಳಿಸುವ ಮೂಲಕ ಜಾತ್ಯತೀತ ದೇಶವನ್ನು ಧರ್ಮದ ಅಧಾರದಲ್ಲಿ ಒಡೆಯಲು ಮುಂದಾಗಿದೆ ಎಂದು ಆರೋಪಿಸಿದರು.