ತುರ್ವಿಹಾಳ (ರಾಯಚೂರು): ‘ಉಪಚುನಾವಣೆ ಬಳಿಕ ಎಲ್ಲಿಯೂ ಕಾಂಗ್ರೆಸ್ ವಿಳಾಸ ಇರುವುದಿಲ್ಲ. ಎಲ್ಲೆಡೆ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಪ್ರತಾಪಗೌಡಪಾಟೀಲ ಅವರನ್ನು ಆಯ್ಕೆ ಮಾಡಿ, ಸೇವೆ ಮಾಡಲು ಅವಕಾಶ ಕೊಡಿ. ನೀರಾವರಿ ಸೇರಿ ಕ್ಷೇತ್ರದ ಬೇಡಿಕೆ ಗಳನ್ನು ಈಡೇರಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತುರ್ವಿಹಾಳದಲ್ಲಿ ಶನಿವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು, ‘ಕಾಂಗ್ರೆಸ್ನವರು ಜಾತಿಯ ವಿಷಬೀಜ ಬಿತ್ತಿ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. 25 ಸಾವಿರ ಮತಗಳ ಅಂತರದಿಂದ ಪ್ರತಾಪಗೌಡ ಗೆಲ್ಲಲಿ ದ್ದಾರೆ. ಅನೇಕ ವರ್ಷಗಳಿಂದ ಬಿಜೆಪಿ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ರೈತರ ಬೇಡಿಕೆಯಂತೆಭತ್ತ ಖರೀದಿ ಕೇಂದ್ರ ಆರಂಭಿಸಲು ಸೂಚಿಸಲಾಗಿದೆ. ₹ 1860 ದರದಲ್ಲಿ ಭತ್ತ ಖರೀದಿ ಮಾಡಲಾಗುವುದು. ₹ 2,620 ದರದಲ್ಲಿ ಜೋಳ ಖರೀದಿ ಮಾಡ ಲಾಗುವುದು. ಉಪಚುನಾವಣೆ ಬಳಿಕ ತುರ್ವಿಹಾಳ ಜನರ ಬೇಡಿಕೆಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಗಾರ್ಮೆಂಟ್ ಸ್ಥಾಪನೆಗೆ ಪರಿಶೀಲಿಸಲಾಗುವುದು' ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಹಾಲಾಪುರಲ್ಲಿ ವ್ಯಕ್ತಿ ಸಾವು: ಕೊಲೆ ಆರೋಪ
ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹಾಲಾಪುರದಲ್ಲಿ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಶನಿವಾರ ಸಾವನ್ನಪ್ಪಿದ್ದು, ಹಿಂದಿನ ದಿನ ಮೃತನೊಂದಿಗೆ ಜಗಳವಾಡಿದ್ದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನಾಗಪ್ಪ ನಾಯಕ (48) ಮೃತ ವ್ಯಕ್ತಿ. ಮದ್ಯದ ಅಮಲಿನಲ್ಲಿ ಇರುತ್ತಿದ್ದ ನಾಗಪ್ಪ ಬೀದಿಗಳಲ್ಲಿ ವಿನಾಕಾರಣ ಜನರ ಮೇಲೆ ರೇಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಿದ್ದ ವ್ಯಕ್ತಿಯು ಶುಕ್ರವಾರ ರಾತ್ರಿ ನಾಗಪ್ಪನ ಕಾಲಿಗೆ ಹೊಡೆದಿದ್ದರು ಎನ್ನಲಾಗಿದೆ. ಕವಿತಾಳ ಠಾಣೆ ಪೊಲೀಸರು ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಶವ ಸಾಗಿಸಿದ್ದಾರೆ.
ಮೌನಾಚರಣೆ: ‘ಹಾಲಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ. ಈ ರೀತಿ ಗುಂಡಾಗಿರಿ ಮಾಡುವವರಿಗೆ ಮತ ಕೊಡಬೇಡಿ. ಬಿಜೆಪಿ ಮತಕೊಡಿ’ ಎಂದು ಸುರಪುರ ಶಾಸಕ ರಾಜುಗೌಡ ಅವರು ತುರ್ವಿಹಾಳದಲ್ಲಿ ಆಯೋಜಿಸಿದ್ದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಹೇಳಿದರು.
ಬಹಿರಂಗ ಸಭೆಯಲ್ಲಿ, ಮೃತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.