ಸಿಂಧನೂರು: ಲಾಕ್ಡೌನ್ನಿಂದಾಗಿ ದೇವದಾಸಿಯರು ಆರ್ಥಿಕ ಸಂಕಷ್ಟಕ್ಕೆ ತ್ತುತ್ತಾಗಿದ್ದು, ಎಲ್ಲರಿಗೂ ಸರ್ಕಾರವು ಮಾಸಿಕ ₹ 7,500 ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲ್ಲೂಕು ಘಟಕ ಮಂಗಳವಾರ ಶಿರಸ್ತೇದಾರ್ ಅಂಬಾದಾಸ್ಗೆ ಮನವಿ ಸಲ್ಲಿಸಿತು.
ಲಾಕ್ಡೌನ್ ವೇಳೆಯಲ್ಲಿ ದೇವದಾಸಿಯರಿಗೆ ಪಡಿತರ ನೀಡಿದೊಂದು ಬಿಟ್ಟರೆ ಮತ್ಯಾವ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಲ್ಲ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಭೂಮಾಲೀಕ ಮತ್ತು ಕಾರ್ಪೋರೇಟ್ ಕಂಪನಿಗಳ ಗುಲಾಮಿತನಕ್ಕೆ ತಳ್ಳಲಿದೆ. ಭೂಸುಧಾರಣಾ ತಿದ್ದುಪಡಿ ಕಾಯ್ದೆ ಮೂಲಕ ಸಿಗಬೇಕಾದ ಜಮೀನುಗಳನ್ನು ಸಿಗದಂತೆ ಮಾಡಲಾಗುತ್ತಿದೆ ಎಂದು ದೂರಿದರು.
ಜನವಿರೋಧಿ ತಿದ್ದುಪಡಿಗಳನ್ನು ವಾಪಾಸ್ ಪಡೆಯಬೇಕು ಮತ್ತು ಸಾರ್ವಜನಿಕ ರಂಗದ ಕೈಗಾರಿಕೆಗಳ ಖಾಸಗೀಕರಣ ನಿಲ್ಲಿಸಬೇಕೆಂದು ಗೌರವಾಧ್ಯಕ್ಷ ನರಸಿಂಹಪ್ಪ ಆಗ್ರಹಿಸಿದರು.
ಪ್ರತಿ ಕುಟುಂಬದ ತಲಾ ಸದಸ್ಯರಿಗೆ ಮಾಸಿಕ ಕನಿಷ್ಠ 10 ಕೆ.ಜಿ ಸಮಗ್ರ ಆಹಾರ ಮತ್ತು ಆರೋಗ್ಯ ಸಾಮಗ್ರಿಗಳ ಕಿಟ್ ಒದಗಿಸಬೇಕು. ಗ್ರಾಮೀಣ ಪ್ರದೇಶದ ಎಲ್ಲಾ ನಾಗರಿಕರ ಉಚಿತ ಆರೋಗ್ಯ ತಪಾಸಣೆಗೆ ಸಾರ್ವಜನಿಕ ಆರೋಗ್ಯ ಇಲಾಖೆಯ ಮೂಲಕ ಕ್ರಮವಹಿಸಬೇಕು.
ಉದ್ಯೋಗ ಖಾತ್ರಿ ಕೂಲಿಯನ್ನು ₹ 600 ಗಳಿಗೆ ಹೆಚ್ಚಿಸಿ, ನಗರ ಪ್ರದೇಶದ ಜನರಿಗೂ ಉದ್ಯೋಗ ಖಾತ್ರಿ ಕೆಲಸವನ್ನು ನೀಡಬೇಕು ಮತ್ತು 200 ದಿನಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ದೇವದಾಸಿ ಮಹಿಳೆಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ತಲಾ ಐದು ಎಕರೆ ಜಮೀನು ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲ್ಲೂಕು ಘಟಕದ ಅಧ್ಯಕ್ಷೆ ಯಲ್ಲಮ್ಮ, ಕಾರ್ಯದರ್ಶಿಗಳಾದ ಕರಿಯಮ್ಮ, ಪಾಪಮ್ಮ, ಸದಸ್ಯರಾದ ಶೇಖಮ್ಮ, ಮಾಯಮ್ಮ, ಹುಸೇನಮ್ಮ, ಹಂಪಮ್ಮ ಇದ್ದರು.