ರಾಯಚೂರು: ಕೇಂದ್ರ ಸರ್ಕಾರ ರೈತರ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ(ಎಂಎಲ್)ರೆಡ್ಸ್ಟಾರ್ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೃಷಿ, ಎಪಿಎಂಸಿ, ಭೂ ಸುಧಾರಣೆ ಇತರೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಗಳು ಕಾರ್ಪೋರೇಟ್ ಕಾಯ್ದೆಗಳಾಗಿದ್ದು, ಕೂಡಲೇ ಹಿಂಪಡೆಯಬೇಕು. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ನಿರಂತರ ಹೋರಾಟಕ್ಕೆ ಸಹಕರಿಸಲಾಗುವುದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಮಸೂದೆಯೊಂದಿಗೆ ಮೂರು ದುಷ್ಕೃತ್ಯಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘಟನೆಗಳು ಘೋಷಿಸಿವೆ. ಸಾಂಸ್ಥಿಕರಣ ಹಾಗೂ ರಾಷ್ಟ್ರೀಯ ಗುಲಾಮಗಿರಿಯ ವಿರುದ್ಧ ಈ ಹೋರಾಟದಲ್ಲಿ ದೇಶಾದಾದ್ಯಂತ ರೈತರ ಹಾಗೂ ಜನರು ಬೆಂಬಲಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲಿಸುವುದರೊಂದಿಗೆ ಕೇಂದ್ರದ ಫ್ಯಾಸಿಸ್ಟ್ ಮೋದಿ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ತಾಲ್ಲೂಕು ಕಾರ್ಯದರ್ಶಿ ರವಿದಾದಾಸ್, ಪದಾಧಿಕಾರಿ ಶೇಖ್ ಹುಸೇನ್ಬಾಷಾ, ಕರಿಮುಲ್ಲಾ, ಲಲಿತಮ್ಮ, ನರಸಿಂಹಲು, ಆಂಜನೇಯ ಇದ್ದರು.