ಮಸ್ಕಿ: ರಸ್ತೆ ಅಪಘಾತ ಸೇರಿದಂತೆ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಂಜೀವಕುಮಾರ ಬಳಿಗಾರ ಕರೆ ನೀಡಿದರು.
ಪಟ್ಟಣದ ಬಸವವೃತ್ತದ ಬಳಿ ಅಭಿನಂದನ್ ಶಿಕ್ಷಣ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಸಂಡೆಫಾರ್ ಸೋಸಿಯಲ್ ವರ್ಕ್ ಅಭಿಯಾನ ನಿಮಿತ್ತ ರಸ್ತೆಯ ಹಂಪ್ಸ್ಗಳಿಗೆ ಬಣ್ಣ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಚಾರದ ನಿಯಮ ಗೊತ್ತಿಲ್ಲದ ಕಾರಣ ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ರಸ್ತೆ ನಿಯಮಗಳನ್ನು ತಿಳಿಸುವ ಮೂಲಕ ಅಪಘಾತ ಪ್ರಕರಣಗಳು ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದರು.
ಪಟ್ಟಣದ ಅಭಿನಂದನ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ 28 ವಾರಗಳಿಂದ ಸಂಡೆ ಫಾರ್ ಸೋಸಿಯಲ್ ವರ್ಕ್ ಹೆಸರಿನಲ್ಲಿ ಪ್ರತಿವಾರ ಒಂದೊಂದು ಸಾಮಾಜಿಕ ಕೆಲಸ ಮಾಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಈ ಭಾನುವಾರ ರಸ್ತೆಯ ಹಂಪ್ಸ್ಗಳಿಗೆ ಬಣ್ಣ ಹಚುವ ಮೂಲಕ ರಸ್ತೆ ಸುರಕ್ಷಾ ಅಭಿಯಾನ ನಡೆಸಿರುವುದು ಶ್ಲಾಘನೀಯ ಎಂದರು.
ಡಾ. ಮಲ್ಲಿಕಾರ್ಜುನ ಇತ್ಲಿ, ಗಾಂಧಿ ಕುಟಿರದ ಮುಖ್ಯಸ್ಥ ಶಿವಪ್ರಸಾದ ಕ್ಯಾತನಟ್ಟಿ, ಪತ್ರಕರ್ತರ ಸಂಘದ ಪ್ರಕಾಶ ಮಸ್ಕಿ, ಅಭಿನಂದನ್ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹಂಪರಗುಂದಿ, ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಇದ್ದರು.