ಮಸ್ಕಿ: ಸದ್ದಿಲ್ಲದೇ ಕನ್ನಡ ಸಾಹಿತ್ಯ ಸೇವೆ

ಮಸ್ಕಿ: ಕನ್ನಡ ಭಾಷೆ ಹಾಗೂ ಬೆಳವಣಿಗೆಗೆ ಅನೇಕ ಸಂಘಟನೆಗಳು ತಮ್ಮದೇ ಆದ ರೀತಿ ಸೇವೆ ಸಲ್ಲಿಸುತ್ತಿವೆ. ಆದರೆ, ಪಟ್ಟಣದಲ್ಲಿ ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಅಕ್ಷರ ಸಾಹಿತ್ಯ ವೇದಿಕೆ ಯಾವುದೇ ಪ್ರಚಾರವಿಲ್ಲದೇ ಅನೇಕ ಚಟುವಟಿಕೆಗಳನ್ನು ಮಾಡುವ ಮೂಲಕ ಜಿಲ್ಲೆಯ ಗಮನ ಸೆಳೆದಿದೆ.
ಅಕ್ಷರ ಸಾಹಿತ್ಯ ವೇದಿಕೆಯ ಕನಸು ಕಂಡ ಗುಂಡುರಾವ್ ದೇಸಾಯಿ ಸರ್ಕಾರಿ ಶಾಲೆಯ ಶಿಕ್ಷಕ. ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಗುಂಡುರಾವ್ ದೇಸಾಯಿ ತನ್ನ ಸಹಪಾಠಿಗಳಾದ ಪರಶುರಾಮ ಕೊಡಗುಂಟಿ ಹಾಗೂ ಪ್ರಭುದೇವ್ ಸಾಲಿಮಠ ಅವರೊಂದಿಗೆ ಅಕ್ಷರ ಸಾಹಿತ್ಯ ವೇದಿಕೆಯನ್ನು ಹುಟ್ಟು ಹಾಕಿ ಅನೇಕ ಸಾಹಿತ್ಯದ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ವಿಶೇಷ.
ಈಗಾಗಲೇ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ. ಸಾಹಿತ್ಯ ಕಮ್ಮಟ, ಮಕ್ಕಳಿಗಾಗಿ ವಿಶೇಷ ಕಮ್ಮಟಗಳು, ನಾಟಕ, ಪುಸ್ತಕ ಅವಲೋಕನ ದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಪ್ರತಿ ನವೆಂಬರ್ನಲ್ಲಿ ಒಂದು ತಿಂಗಳು ಅಕ್ಷರ ಸಾಹಿತ್ಯ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಪೇಸ್ಬುಕ್ ಲೈವ್ನಲ್ಲಿ ಆಯೋಜನೆ ಮಾಡಿ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳ ಸಾಹಿತಿಗಳೊಂದಿಗೆ ಸಂವಾದ, ವಿಮರ್ಶೆ, ಅವಲೋಕನ, ಕವಿಗೋಷ್ಠಿ, ಇಂದಿನ ಸಾಹಿತ್ಯದ ಬಗ್ಗೆ ಚರ್ಚೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾವಿರಾರು ವೀಕ್ಷಕರ ಮೆಚ್ಚುಗೆ ಗಳಿಸಿದೆ.
ಪ್ರತಿವರ್ಷ ಗಾಂಧಿ ಜಯಂತಿ ದಿನದಂದು ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗಾಂಧಿ ಕುರಿತಾದ ಕೋವಿಗೋಷ್ಠಿ ಹಾಗೂ ಪ್ರತಿವರ್ಷ ಮಕ್ಕಳಿಗಾಗಿ ನಾಟಕ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಗುರುತಿಸಿಕೊಂಡಿದೆ.
‘ಕನ್ನಡ ಸಾಹಿತ್ಯ ಪ್ರತಿ ಮನೆ ಮನೆಗೆ ಮುಟ್ಟಬೇಕು, ಅದಕ್ಕಾಗಿ ಅಕ್ಷರ ಸಾಹಿತ್ಯ ವೇದಿಕೆ ನಿರಂತರ ಕಾರ್ಯಕ್ರಮ ನಡೆಸುತ್ತಿದೆ‘ ಎನ್ನುತ್ತಾರೆ ಅಕ್ಷರ ಸಾಹಿತ್ಯ ವೇದಿಕೆಯ ಸಂಚಾಲಕ ಗುಂಡುರಾವ್ ದೇಸಾಯಿ ಅವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.