ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಪ್ರವಾಹ ಅಬ್ಬರ ಏರುಗತಿಯಲ್ಲಿದ್ದು, ನದಿತೀರದ ಗ್ರಾಮಗಳಲ್ಲಿ ಗುರುವಾರವೂ ವಿಪತ್ತು ನಿರ್ವಹಣಾ ತಂಡಗಳು ಕಟ್ಟೆಚ್ಚರ ವಹಿಸಿವೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 2.19 ಲಕ್ಷ ಕ್ಯುಸೆಕ್ ಅಡಿ ನೀರು ಹೊರಬಿಡಲಾಗುತ್ತಿದೆ. ಲಿಂಗಸುಗೂರು ನಡುಗಡ್ಡೆಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಈಗ ಸುಮಾರು 50 ಕಿಮೀ ಸುತ್ತುವರೆದು ಜಲದುರ್ಗ ಮಾರ್ಗದ ಮೂಲಕ ಲಿಂಗಸುಗೂರಿಗೆ ಬರಬೇಕಿದೆ.
ಪ್ರವಾಹಮಟ್ಟ ಏರುಗತಿಯಲ್ಲಿದ್ದು, 2.5 ಲಕ್ಷ ಕ್ಯುಸೆಕ್ ಗಿಂತ ಹೆಚ್ಚು ನೀರು ಹರಿದುಬಂದರೆ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಲಿದೆ. ಇದರಿಂದ ಕಲಬುರಗಿ-ರಾಯಚೂರು ಸಂಪರ್ಕದ ಪ್ರಮುಖ ಮಾರ್ಗ ಕಡಿತವಾಗಲಿದೆ.
ತುಂಗಭದ್ರಾ ನದಿಯಲ್ಲಿ 1.80 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಮಾನ್ವಿ ತಾಲ್ಲೂಕಿನ ನದಿತೀರದ ಕೆಲವು ಗ್ರಾಮಗಳ ಕೃಷಿಬೆಳೆ ನೀರುಪಾಲಾಗಿವೆ. ಯಾವುದೇ ಜೀವ, ಆಸ್ತಿ ಹಾನಿಯಾಗಿಲ್ಲ. ಮಂತ್ರಾಲಯದಲ್ಲಿ ನದಿತಟದ ಮೆಟ್ಟಿಲುಗಳ ಮೇಲೆ ಪ್ರವಾಹವು ತಲುಪಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.