ರಾಯಚೂರು: ಮನೆಗಳು, ಇತರೆ ನಿರ್ಮಾಣ, ಸರ್ಕಾರಿ ಕಚೇರಿಗಳ ನಿರ್ಮಾಣವಾಗಬೇಕಾದರೆ ಕಾರ್ಮಿಕರ ಶ್ರಮ ಮುಖ್ಯವಾಗಿದೆ. ನಗರದ ಯರಮರಸ್ ರಸ್ತೆಯಲ್ಲಿ ಶೀಘ್ರವೇ ₹2 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಡಾ.ಶಿವರಾಜ ಪಾಟೀಲ ತಿಳಿಸಿದರು.
ನಗರದ ಗಾಜಗಾರಪೇಟೆ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರುಗಳು ಕುಳಿತು ಯೋಜನೆ ರೂಪಿಸುತ್ತಾರೆ. ಆದರೆ ಕಾರ್ಮಿಕರು ಸ್ಥಳದಲ್ಲಿದ್ದುಕೊಂಡು ಕೆಲಸ ಮಾಡುತ್ತಾರೆ. ಅವರಿಗಿಂತ ಕಾರ್ಮಿಕರ ನೈಪುಣ್ಯತೆ ಮೆಚ್ಚುವಂತಾಗಿದೆ ಎಂದು ಹೇಳಿದರು.
ಇಎಸ್ಐ ಆಸ್ಪತ್ರೆ ನಿರ್ಮಾಣ, ಕಾರ್ಮಿಕರಿಗೆ ವಿವಿಧ ಕಿಟ್ ಗಳನ್ನು ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಹೆಚ್ಚುವರಿಯಾಗಿ ಒಂದು ಸಾವಿರ ಕಿಟ್ ಬಿಡುಗಡೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವರು ತಿಳಿಸಿದ್ದಾರೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಗುಡಿಸಲುಮುಕ್ತ ನಗರ ನಿರ್ಮಾಣಕ್ಕೆ ಪಣ ತೊಟ್ಟಿ ವಾರ್ಡ್ ನಂಬರ್ 19, 20 ಹಾಗೂ 21ರಲ್ಲಿ ಮನೆಗಳ ನಿರ್ಮಾಣ ಮಾಡಿದ್ದು ಇನ್ನೂ 2700 ಮನೆಗಳು ಮಂಜೂರಿಯಾಗಿದ್ದು , ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಫಲಾನುಭವಿಗಳಿಗೆ ಸೌಲಭ್ಯ ನೀಡಲು ನಗರಸಭೆ ಸದಸ್ಯರು ಸಹಕಾರ ನೀಡಬೇಕು ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿ,ನಗರದಲ್ಲಿ ಕಾರ್ಮಿಕರು ಹೆಚ್ಚಾಗಿ ವಾಸವಾಗಿದ್ದಾರೆ. ಕಾರ್ಮಿಕರಿಗೆ ಆರೋಗ್ಯ, ಮಕ್ಕಳಿಗೆ ಶಿಕ್ಷಣ ಸೇರಿ ಇತರೆ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕಿದೆ ಎಂದು ತಿಳಿಸಿದರು.
ಕಾರ್ಮಿಕರು, ಮೇಸ್ತ್ರಿಗಳನ್ನು ಸನ್ಮಾನಿಸಲಾಯಿತು. ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಉಪಾಧ್ಯಕ್ಷ ನರಸಮ್ಮ ಮಾಡಗಿರಿ, ರಾಜಾ ಶ್ರೀನಿವಾಸ, ಆರ್ಡಿಎ ಮಾಜಿ ಅಧ್ಯಕ್ಷ ಗೋಪಾಲರೆಡ್ಡಿ, ಕಡಗೋಲ ಆಂಜನೇಯ್ಯ, ರವೀಂದ್ರ ಜಲ್ದಾರ, ನಗರಸಭೆ ಸದಸ್ಯ ಎನ್.ಕೆ.ನಾಗರಾಜ , ಶಶಿರಾಜ, ಸತೀಶ, ಜನಾರ್ಧನ ಹಳ್ಳಿಬೆಂಚಿ , ಕೆ.ಪಿ. ಅನಿಲ್ಕುಮಾರ ಇದ್ದರು.