ರಾಯಚೂರು: ಲೋಕಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಈವರೆಗೆ ಒಟ್ಟು 11 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಂದೇ ಕ್ರೇತ್ರದಿಂದ ಆಯ್ಕೆ ಬಯಸಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ ಇಬ್ಬರು ನಾಮಪತ್ರ ದಾಖಲು ಮಾಡಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ ಆರು ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಅಧಿಕೃತ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್ನಿಂದಲೇ ಸುಪ್ರಿಂಕೋರ್ಟ್ ನಿವೃತ್ತ ವಕೀಲ ಕೆ.ದೇವಣ್ಣ ನಾಯಕ, ಬಹುಜನ ಸಮಾಜ ಪಾರ್ಟಿಯ ಅರಕೇರಾದ ನರಸಣ್ಣಗೌಡ ಹೊಸಮನಿ, ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಯಾದಗಿರಿಯ ರಾಮಲಿಂಗಪ್ಪ ಬಸವಲಿಂಗಪ್ಪ, ಭಾರತೀಯ ಜನ ಸಾಮ್ರಾಟ ಪಾರ್ಟಿಯ ಬಾಬುರಾವ್ ಮೇದಾರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಯಲ್ಲಮ್ಮ ಬಸವರಾಜ ನಾಮಪತ್ರ ದಾಖಲು ಮಾಡಿದ್ದಾರೆ.
ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಜಿ.ಕುಮಾರ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಮಾನ್ವಿಯ ಬಸವಪ್ರಭು ಮಲ್ಲಪ್ಪ, ಪಕ್ಷೇತ್ರರ ಅಭ್ಯರ್ಥಿಗಳಾಗಿ ನರಸಿಂಹ ನಾಯಕ ಹಾಗೂ ಅಮರೇಶ ಸವಾರಪ್ಪ ಮೊದಲೇ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಜಿಲ್ಲೆಗೆ ಸಾಮಾನ್ಯ ವೀಕ್ಷಕರ ಆಗಮನ: ಸಾರ್ವಜನಿಕರ ಭೇಟಿಗೆ ಅವಕಾಶ
ರಾಯಚೂರು: ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕೇತ್ರದ ಸಾಮಾನ್ಯ ವೀಕ್ಷಕರಾಗಿ ಅಜಯ್ ಪ್ರಕಾಶ ಜಿಲ್ಲೆಗೆ ಆಗಮಿಸಿದ್ದಾರೆ. ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
ನಗರದ ಯರಮರಸ್ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು ಅಥವಾ ಮೊ.ಸಂ: 7411704584 ಸಂಖ್ಯೆಗೆ ಸಂಪರ್ಕಿಸಿ ಲೋಕಸಭಾ ಚುನಾವಣೆ ಸಂಬಂಧಿಸಿದ ಅಹವಾಲು, ಮಾಹಿತಿಯನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಮದ್ಯ ನಿಷೇಧ
ರಾಯಚೂರು: ಲೋಕಸಭಾ ಚುನಾವಣೆಯ ಹಿನ್ನೆಯಲ್ಲಿ ಮತದಾನ ದಿನವಾದ ಮೇ 7ಹಾಗೂ ಮತ ಎಣಿಕೆ ದಿನವಾದ ಜೂನ್ 4ರಂದು ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪೂರ್ಣಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಎಲ್ಲ ರೀತಿಯ ಮಧ್ಯದ ಅಂಗಡಿಗಳಲ್ಲಿ, ಬಾರ್ ಡಿಪೊ ಅಥವಾ ಇನ್ನಾವುದೇ ಸ್ಥಳದಲ್ಲಿ ಮದ್ಯ ಮಾರಾಟ ಅಥವಾ ಮಧ್ಯ ಪಾನ ಮಾಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೇ 6, 7ರಂದು ನಿಷೇಧಾಜ್ಞೆ ಜಾರಿ
ರಾಯಚೂರು ಜಿಲ್ಲೆಯಾದ್ಯಂತ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮೇ 6ರಂದು ಸಂಜೆ 6 ಗಂಟೆಯಿಂದ ಮೇ 7ರ ರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಗರದ ಎಸ್.ಆರ್.ಪಿ.ಎಸ್. (ಪಿಯು) ಕಾಲೇಜ್ ಹಾಗೂ ಎಲ್.ವಿ.ಡಿ, ಕಾಲೇಜ್ ನಲ್ಲಿ ಸ್ಥಾಪಿಸಲಾಗಿರುವ ಎಲ್ಲ ಭದ್ರತಾ ಕೊಠಡಿಗಳ ಸುತ್ತಮುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ ಮೇ 7ರಿಂದ ಮತ ಎಣಿಕೆ ಕಾರ್ಯ ಮುಗಿಯುವ ವರೆಗೂ ದಂಡ ಪ್ರಕಿಯ ಸಂಹಿತೆ 1973 ರ ಕಲಂ.144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.