ತುರ್ವಿಹಾಳ: ಮತದಾರರ ಪಟ್ಟಿಯ ಪರಿಷ್ಕರಣೆಯಿಂದಾಗಿ ಮತದಾರ ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಕಾರಣ ಉಪ ಚುನಾವಣೆಯಲ್ಲಿ ಮತ ಹಾಕುವ ಅವಕಾಶ ಕಳೆದುಕೊಂಡಿರುವುದಕ್ಕೆ ಮತದಾರರು ಶನಿವಾರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪಟ್ಟಣದ ಮತದಾರರು ಮತ ಚಲಾಯಿಸಲು ಬಂದಾಗ ಮತದಾರರ ಪಟ್ಟಿಯಲ್ಲಿ ಹೆಸರು ಸಿಗದೇ ಇದ್ದಾಗ, ‘ತಮ್ಮ ಅಭ್ಯರ್ಥಿಯ ಆಯ್ಕೆಯ ಕನಸು ನನಸಾಗುವ ಅವಕಾಶ ಸಿಗಲಿಲ್ಲ, ನಾವೂ ಬದುಕಿದ್ದು ಸತ್ತಂತೆ‘ ಎಂದು ಅಳಲು ತೋಡಿಕೊಂಡರು.
‘ಈ ಹಿಂದೆ ಅನೇಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ. ಆದರೆ ಈ ಬಾರಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಉಪಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ತಪ್ಪಿತು‘ ಎಂದು ಮತದಾರರು ದೂರಿದರು.
ಸುಮಾರು 50 ಜನ ಮತ ವಂಚಿತ ಮತದಾರರು ಚುನಾವಣಾ ಅಧಿಕಾರಿಗಳ ಮೂಲಕ ತಹಶೀಲ್ದಾರ, ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಾಗ , ಅವರು ಸಧ್ಯಕ್ಕೆ ದೂರು ಕೊಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಂಕ್ರಗೌಡ ದೇವರಮನಿ ಹೇಳಿದರು.