ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ನೀಡುವ ಸಹಾಯಧನ ಕಡಿತ ಮಾಡಿರುವುದನ್ನು ಖಂಡಿಸಿ ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 421 ದಿನ ಕಳೆದಿದೆ. ದಲಿತರ ಕಲ್ಯಾಣಕ್ಕಾಗಿ ಸ್ಥಾಪನೆಯಾಗಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ನಿರುದ್ಯೋಗಿ ಯುವಕರಿಗೆ ನೀಡುತ್ತಿದ್ದ ₹3.5 ರಿಂದ 5 ಲಕ್ಷದ ವರೆಗೆ ಇದ್ದ ಸಹಾಯಧನವನ್ನು ₹50,000 ₹1 ಲಕ್ಷದ ವರೆಗೆ ಕಡಿತ ಮಾಡಿರುವುದು ದಲಿತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದಿನ ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಹೆಚ್ಚುವರಿ ಸಹಾಯಧನ ನೀಡುತ್ತಿತ್ತು. ಆದರೆ ಪ್ರಸ್ತುತ ಯಡಿಯೂರಪ್ಪ ನವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸಹಾಧನ ಕಡಿತಗೊಳಿಸಿದ್ದು ಖಂಡನೀಯ. ಜಿಲ್ಲಾವಾರು ಆಯ್ಕೆ ಸಮಿತಿಗೆ ಸ್ಥಳೀಯ ಶಾಸಕರನ್ನು ನೇಮಕ ಮಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಬಂದೇನವಾಜ, ಮಹೇಶ ಕುಮಾರ, ಈ ಕುಮಾರಸ್ವಾಮಿ, ಶಬ್ಬೀರ್ ಅಲಿ, ರವಿಚಂದ್ರ, ಭೀಮೇಶ ಕುರ್ಡಿ, ಆಂಜಿನಯ್ಯ, ಅಬ್ದುಲ್ ಕರಿಂ, ಎಂ.ಡಿ.ರಫೀಕ್ ಇದ್ದರು.