ರಾಯಚೂರು: ನಗರದ ನವೋದಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 40 ರೋಗಿಗಳಿಗೆ ಆಮ್ಲಜನಕ ಕೊರತೆಯಾಗಿದ್ದು, ಕೂಡಲೇ ಜಿಲ್ಲಾಡಳಿತದಿಂದ ಆಮ್ಲಜನಕ ಜಂಬೋ ಸಿಲಿಂಡರ್ ಪೂರೈಸಿ ಜನರ ಪ್ರಾಣ ಉಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ ಅವರು ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದಲ್ಲಿ ಒಬ್ಬರೇ ಧರಣಿ ಆರಂಭಿಸಿದ್ದಾರೆ.
‘ಕೋವಿಡ್ ರೋಗಿಗಳಿಗೆ ಸರ್ಕಾರ ಸಮರ್ಪಕವಾಗಿ ಚಿಕಿತ್ಸೆ ಒದಗಿಸುತ್ತಿಲ್ಲ. ಆಮ್ಲಜನಕದ ಕೊರತೆ ಸರಿದೂಗಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿಲ್ಲ. ಕನಿಷ್ಠ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿದ್ದು ವ್ಯವಸ್ಥೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
‘ಸರ್ಕಾರಕ್ಕೆ ಕಣ್ಣು, ಕವಿ ಏನೂ ಇಲ್ಲ. ಜನರಿಗೆ ಲಸಿಕೆ ಇಲ್ಲ, ಔಷಧಿ ಒದಗಿಸುತ್ತಿಲ್ಲ. ಉಸ್ತುವಾರಿ ಸಚಿವರು ಜಿಲ್ಲೆಗೆ ಬರಬೇಕು’ ಎಂದು ಒತ್ತಾಯಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಏಕಾಏಕಿ ಆಮ್ಲಜನಕ ಪೂರೈಕೆ ಬಂದ್ ಮಾಡಲಾಗಿದೆ. ಆಮ್ಲಜನಕ ಆಧಾರದಲ್ಲಿರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಖಾಸಗಿ ವೈದ್ಯರು ಸೂಚಿಸಿದ್ದರಿಂದ, ರೋಗಿ ಸಂಬಂಧಿಗಳು ಗಾಬರಿಯಿಂದ ಓಡಾಡುತ್ತಿದ್ದಾರೆ. ಸರ್ಕಾರಕ್ಕೆ ಕೋವಿಡ್ ರೋಗಿಗಳ ಬಗ್ಗೆ ಕಾಳಜಿ ಇದ್ದರೆ ಈ ರೀತಿ ಆಗುತ್ತಿರಲಿಲ್ಲ. ಧರಣಿ ಆರಂಭಿಸಿದ ಬಳಿಕ ಕೆಲವು ಸಿಲಿಂಡರ್ ಕಳುಹಿಸಲಾಗಿದೆ. ಆದರೆ ಇದು ವ್ಯವಸ್ಥೆಯಲ್ಲ. ಜನರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕಾದ ಉಸ್ತುವಾರಿ ಸಚಿವರು ಬರಬೇಕು ಎಂದು ಪಟ್ಟುಹಿಡಿದಿದ್ದಾರೆ.