ಮಸ್ಕಿ: ನಾರಾಯಣಪುರ ಬಲದಂಡೆಯ 5(ಎ) ಉಪ ಕಾಲುವೆ ಯೋಜನೆ ಅನುಷ್ಠಾನ ಮಾಡದಿದ್ದರೆ ಬಿಜೆಪಿಯಿಂದ ಬೃಹತ್ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಎಚ್ಚರಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆ ಅನುಷ್ಠಾನ ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ಯೋಜನೆ ಜಾರಿ ಮಾಡುವುದಾಗಿ ಕಾಂಗ್ರೆಸ್ ಸುಳ್ಳು ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು 6 ತಿಂಗಳಾಗಿವೆ. ಅಧಿವೇಶನದಲ್ಲಿ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವ ನೀಡಿದ ಉತ್ತರ ಕಾಂಗ್ರೆಸ್ ಬಣ್ಣವನ್ನು ಬಯಲು ಮಾಡಿದೆ’ ಎಂದು ಟೀಇಸಿದರು.
‘5(ಎ) ಕಾಲುವೆ ಯೋಜನೆ ಜಾರಿ ಕುರಿತು ಜನರಿಗೆ ನೀಡಿದ್ದ ಮಾತನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದರು.
‘ನೀರಾವರಿ ವಂಚಿತ ಗ್ರಾಮಗಳಿಗೆ ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಕೊಡಿಸಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ರದ್ಧು ಮಾಡಿತು. ಈಗ ಈ ರೈತರಿಗೆ ಶಾಶ್ವತ ನೀರಿನಿಂದ ವಂಚಿತ ಮಾಡಿದೆ’ ಎಂದು ದೂರಿದರು.
‘ಮಸ್ಕಿ ಕ್ಷೇತ್ರದಲ್ಲಿ ತಾಲ್ಲೂಕು ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತಿದ್ದಾರೆ’ ಎಂದು ಟೀಕಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಸಿದ್ದಣ್ಣ ಹೂವಿನಭಾವಿ, ಬಿ.ಎಚ್.ದಿವಟರ್, ಮಲ್ಲು ಯಾದವ್, ಶರಣಯ್ಯ ಸೊಪ್ಪಿಮಠ ಇದ್ದರು.