ರಾಯಚೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದರೂ ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಉತ್ತಮವಾದ ಬದುಕು ಸಿಕ್ಕಿಲ್ಲ. ಜಾತಿವಾದ, ಕೋಮುವಾದ ಬಂಡವಾಳಶಾಹಿ ಆರ್ಥಿಕ ನೀತಿಗಳು ಇದಕ್ಕೆ ಮೂಲ ಕಾರಣವಾಗಿವೆ. ಸರ್ಕಾರದ ದುರಾಡಳಿತದ ವಿರುದ್ಧ ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಷ್ಟ್ಟ್ರೀಯ ಅಧ್ಯಕ್ಷ ವಿ. ಪಿ. ಸಾನು ತಿಳಿಸಿದರು.
ಶಿಕ್ಷಣ, ಸಂವಿಧಾನ, ಭಾರತ ಉಳಿಸಿ ಎಂಬ ಘೋಷಣೆಯಡಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ಜಾಗೃತಿ ಜಾಥಾ ಬುಧವಾರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣ ಬಳಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಮೂಲಕ ಸೈನ್ಯವನ್ನು ಖಾಸಗಿಕರಣ, ಕಾರ್ಪೋರೆಟ್ ಸಂಸ್ಥೆಗೆ ನೀಡಲು ಮುಂದಾಗಿದೆ.ಅಗ್ನಿಪಥ್ ತರಬೇತಿ 6 ತಿಂಗಳ ಅವಧಿಯಲ್ಲಿ ಏನು ಕಲಿಯಲು ಸಾಧ್ಯ ಎಂದು ಹೇಳಿದರು.
ಕೇಂದ್ರ ಸರ್ಕಾರ ವ್ಯಾಪ್ತಿಯ ಖಾಲಿಯಿರುವ 40 ಲಕ್ಷ ಹುದ್ದೆ ಖಾಲಿ ಇದ್ದು ಭರ್ತಿ ಮಾಡಲು ನೇಮಕಾತಿ ಹೊರಡಿಸುತ್ತಿಲ್ಲ. ಶೇ 27 ರಷ್ಟು ಮಾತ್ರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉಚಿತ ಶಿಕ್ಷಣ ನೀಡದೇ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಕೇಂದ್ರ ಸರ್ಕಾರ ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ಬ್ರಿಟಿಷ್ ಸರ್ಕಾರವೂ ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸಿರಲಿಲ್ಲ ಎಂದು ಟೀಕಿಸಿದರು.
ಎಸ್ ಎಫ್ ಐ ಕೇಂದ್ರ ಸಮಿತಿ ಸದಸ್ಯ ನಿತೀಶ ನಾರಾಯಣ ಮಾತನಾಡಿ, ರಾಯಚೂರು ಆರ್ಥಿಕವಾಗಿ ಸಾಮಾಜಿಕ, ಶೈಕ್ಷಣಿಕವಾಗಿ ತೀರ ಹಿಂದುಳಿದ ಜಿಲ್ಲೆಯಾಗಿದೆ. ವಿಶ್ವವಿದ್ಯಾಲಯ ಮೆಡಿಕಲ್ ಕಾಲೇಜ್ ಮುಂತಾದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಪ್ರೊ. ನಂಜುಂಡಪ್ಪ ವರದಿ ಶಿಫಾರಸು ಮಾಡಲಾಗಿದೆ. ಆದರೆ ಯಾವ ಸೌಲಭ್ಯಗಳು ಸಿಕ್ಕಿಲ್ಲ ಎಂದರು.
ಎಸ್ಎಫ್ಐ ರಾಜ್ಯಧ್ಯಕ್ಷ ಅಂಬರೀಶ ಕಡಗದ ಮಾತನಾಡಿ, ಯಾವ ದೇಶದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸುತ್ತಾರೋ ಆ ದೇಶ ಹಾಳಾಗುತ್ತದೆ. ಉತ್ತಮ, ಗುಣಮಟ್ಟದ ಶಿಕ್ಷಣಕ್ಕೆ ಎಸ್ಎಫ್ಐ ಅನೇಕ ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸಿದರೂ ಎನ್.ಇಪಿ ಜಾರಿಗೊಳಿಸಿ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ಖಾಸಗಿ ಶಿಕ್ಷಣ ದುಬಾರಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೌಲಭ್ಯಗಳ ವಂಚಿತದಿಂದ ನಲಗುತ್ತಿದ್ದು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಸ್ಎಫ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೂ ಮೊದಲು ರಾಯಚೂರಿನ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಜಾಥಾವನ್ನು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿ ಎಸ್ಎಫ್ಐ ರಾಷ್ಟ್ರೀಯ, ರಾಜ್ಯ ನಾಯಕರನ್ನು ಬರಮಾಡಿಕೊಂಡರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ , ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ರಾಜ್ಯ ಸಮಿತಿ ಸದಸ್ಯ ಬಸವಂತ, ಚಿದಾನಂದ, ಸುಜಾತಾ, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ, ಬಸವರಾಜ, ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಕೆಜಿ ವೀರೇಶ, ಕೃಷಿ ಕೂಲಿಕಾರ ಸಂಘಟನೆಯ ಜಿಲ್ಲಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಎಲ್ಐಸಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರವಿ, ಅಶೋಕ, ವಕೀಲ ಮಾರೆಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.