ಪ್ರಜಾವಾಣಿ ವಾರ್ತೆ
ತುರ್ವಿಹಾಳ: ಪಟ್ಟಣದಲ್ಲಿ ಶಂಕರಲಿಂಗೇಶ್ವರ ದೇವರ ಜಾತ್ರೆಯ ಅಂಗವಾಗಿ ಭಾನುವಾರ ಸ್ವಾಮಿಯ ರಥೋತ್ಸವ ಸಂಭ್ರಮದಿಂದ ಜರುಗಿತು.
ಯುಗಾದಿ ಅಮಾವಾಸ್ಯೆಯ ಆರಂಭದಿಂದಲೂ ದೇವರಿಗೆ ಅಭಿಷೇಕ, ಬಿಲ್ವಾರ್ಚನೆ, ಕಳಸಾರೋಹಣ ಮತ್ತು ವಿಶೇಷಪೂಜೆ ನಡೆಯಿತು.
ಯುಗಾದಿಯ ಹಬ್ಬದ ಕೊನೆ ದಿನವಾದ ಭಾನುವಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ, ಪ್ರತಿ ವರ್ಷದಂತೆ ಬಸವಣ್ಣನ ಕಟ್ಟೆಯವರೆಗೆ ರಥವನ್ನು ಎಳೆಯುವದರ ಮೂಲಕ ಗ್ರಾಮಸ್ಥರು ಸಂಭ್ರಮದಿಂದ ಜಾತ್ರೆ ಆಚರಿಸಿದರು.
ಅಮರಗುಂಡಯ್ಯ ತಾತ, ಮಾದಯ್ಯ ಗುರುವಿನ್, ಗುಂಡಯ್ಯ ಅಪ್ಪಾಜಿ, ಶಾಸಕ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ.ಪಂ ಮುಖ್ಯಾಧಿಕಾರಿ ಹಾಜಿಬಾಬು, ಪ.ಪಂ ಸದಸ್ಯರು, ದೇವಸ್ಥಾನ ಸಮಿತಿಯ ಅಧ್ಯಕ್ಷ ಅಮರೇಶಪ್ಪ ಕೆಲ್ಲೂರು, ಬಸವರಾಜ ಗುಂಜಳ್ಳಿ, ತಿಪ್ಪಣ್ಣ ನವಲಹಳ್ಳಿ, ಕುಮಾರೆಪ್ಪ ಪವಾಶೆಟ್ಟಿ, ಶಂಕ್ರಪ್ಪಯ್ಯಶೆಟ್ಟಿ, ಸಂಗಪ್ಪ ಸಜ್ಜನ, ಪಾರೂಖ ಸಾಬ್, ನಾಗಪ್ಪ ಹೂವಿನಬಾವಿ, ಆರ್.ಸಿದ್ದನಗೌಡ ಹಾಗೂ ಗ್ರಾಮಸ್ಥರು ಇದ್ದರು.
ವೆಂಕಟೇಶ್ವರ ಸ್ವಾಮಿ ಕೊಂಡೋತ್ಸವ: ತುರ್ವಿಹಾಳ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಮುಂದೆ ಭಾನುವಾರ ಉಪ್ಪಾರ ಸಮಾಜದವರು ಸಂಭ್ರಮ ದಿಂದ ಕೊಂಡೋತ್ಸವ ಆಚರಿಸಿದರು.
ಯುಗಾದಿ ಹಬ್ಬದ ಮೂರನೇ ದಿನ ಆಂಧ್ರ ಪ್ರದೇಶದ ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ನಡೆಯುವ ಕೊಂಡೋತ್ಸವದ ಧಾರ್ಮಿಕ ಸಂಪ್ರದಾಯದಂತೆ ಪಟ್ಟಣದಲ್ಲಿ ಬಹುಕಾಲದಿಂದಲೂ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊಂಡೋತ್ಸವ ಆಚರಿಸುತ್ತಾ ಬರಲಾಗಿದೆ.
ನಾಯಕ ಜನಾಂಗದವರು ಬೇಟೆಯಾಡಿ ತಂದ ಬೇಟೆಯನ್ನು ಕೊಂಡೋತ್ಸವದಲ್ಲಿ ಪ್ರದರ್ಶನ ಮಾಡುವುದು. ಕುಂಬಾರ ಮನೆಯಿಂದ ಐರಾಣಿ ತರುವುದು, ಕಬ್ಬೇರರು ಊರ ಸುತ್ತ ಹಾಲು ಎರೆಯುವ ಸಂಪ್ರದಾಯ ಊರಿಗೆ ಒಳಿತಾಗಲಿ ಎನ್ನುವುದೇ ಗ್ರಾಮಸ್ಥರ ಅಪಾರ ನಂಬಿಕೆಯಾಗಿದೆ ಎಂದು ಸ್ವಗ್ರಾಮದವರಾದ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಿರುಮಲ ಬೆಟ್ಟದಲ್ಲಿ ವೆಂಕಟೇಶ್ವರ ಸ್ವಾಮಿಗೆ ಭಕ್ತರು ತಲೆಮುಡಿ ಕೊಟ್ಟು ಕೊಂಡದಲ್ಲಿ ಮುಳಗಿ ತಮ್ಮ ಕಷ್ಟವನ್ನು ಕಳೆದು ಹೊಸ ಬದುಕು ನಡೆಸುವ ಆಧ್ಯಾತ್ಮಿಕ ನಂಬಿಕೆಯ ಪ್ರತಿಬಿಂಬವೇ ಯುಗಾದಿ ಹಬ್ಬವಾಗಿದೆ ಎಂದು ಸಮಾಜದ ಮುಖಂಡ ಯಂಕಣ್ಣ ಉಪ್ಪಳ ಅಭಿಮತ ವ್ಯಕ್ತಪಡಿಸಿದರು. ಶಾಸಕ ಬಸನಗೌಡ ತುರ್ವಿಹಾಳ, ಪ್ರತಾಪಗೌಡ ಪಾಟೀಲ್, ಪ.ಪಂ ಮುಖ್ಯಾಧಿಕಾರಿ ಹಾಜಿಬಾಬು ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.