ರಾಯಚೂರು: ಬೆಳಿಗ್ಗೆ 9 ರಿಂದ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದ್ದ ಹಾಸನ-ಸೋಲ್ಲಾಪುರ ರೈಲು ಕೊನೆಗೂ ಕಲಬುರಗಿ ಕಡೆಗೆ 11.15 ಕ್ಕೆ ಸಂಚರಿಸಿದ್ದು, ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದ ಎಇ ಹುದ್ದೆ ಆಕಾಂಕ್ಷಿಗಳು ಇದೇ ರೈಲಿನಲ್ಲಿ ಕಲ್ಬುರ್ಗಿಗೆ ತೆರಳಿದರು.
ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಪರೀಕ್ಷೆ ತಪ್ಪಿಸಿಕೊಂಡು ಹತಾಶರಾಗಿದ್ದವರ ಮನವೊಲಿಸಿದರು.
ಈ ಕುರಿತು ಕೆಪಿಎಸ್ಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂತೋಷ ಕಾಮಗೌಡ ಅವರು, 'ಮಧ್ಯಾಹ್ನದ ಪರೀಕ್ಷೆಗೆ ಎಲ್ಲರೂ ಹಾಜರಾಗಬೇಕು. ಬೆಳಗಿನ ಪರೀಕ್ಷೆ ಮತ್ತೆ ನೆಡಸುವ ಕುರಿತು ಆನಂತರ ತಿಳಿಸಲಾಗುತ್ತದೆ ಎಂದು ಕೆಪಿಎಸ್ ಸಿಯಿಂದ ತಿಳಿಸಲಾಗಿದೆ. ಕೂಡಲೇ ಎಲ್ಲರೂ ಕಲಬುರಗಿ ಪರೀಕ್ಷಾ ಕೇಂದ್ರದತ್ತ ತೆರಳಬೇಕು' ಎಂದು ತಿಳಿಸಿದರು.
ಕೆಪಿಎಸ್ಸಿಯಿಂದ ಬಂದಿರುವ ಸೂಚನೆ ಒಪ್ಪಿದ್ದ ಎಇ ಹುದ್ದೆ ಉದ್ಯೋಗಾಕಾಂಕ್ಷಿಗಳು, ರೈಲು ಏರಿಕೊಂಡರು.
ತಾಂತ್ರಿಕ ಕಾರಣಗಳಿಂದ ಐದು ಗಂಟೆ ವಿಳಂಬವಾಗಿದ್ದ ಹಾಸನ- ಸೋಲ್ಲಾಪುರ ರೈಲು ರಾಯಚೂರಿನಲ್ಲಿ ಮತ್ತೆ ಎರಡು ಗಂಟೆ ತಡವಾಗಿ, ಈಗ ಸಂಚರಿಸುತ್ತಿದೆ.