ರಾಯಚೂರು: ‘ಹಿಂದುಳಿದ ವರ್ಗಕ್ಕೆ ಸೇರಿದವರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದನ್ನು ತಡೆಯಬೇಕು’ ಎಂದು ಮಸ್ಕಿ ತಾಲ್ಲೂಕಿನ ತುರ್ವಿಹಾಳ ವಾಲ್ಮೀಕಿ ಗುರುಪೀಠದ ಆತ್ಮಾನಂದ ಸ್ವಾಮೀಜಿ ಒತ್ತಾಯಿಸಿದರು.
‘ಪರಿಶಿಷ್ಟ ಪಂಗಡದ ಹೆಸರಿನಲ್ಲಿ ತಳವಾರ, ಪರಿವಾರ, ಗೊಂಡ ರಾಜಗೊಂಡ, ಕಾಡು ಕುರುಬ ಸಮುದಾಯದವರು ಕಾನೂನು ಬಾಹಿರವಾಗಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಮೂಲ ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗುತ್ತಿದೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ನಕಲಿ ದಾಖಲೆ ಸಲ್ಲಿಸಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ತನಿಖಾ ಸಮಿತಿ ರಚನೆ ಮಾಡಬೇಕು. ಪರಿಶಿಷ್ಟ ಪಂಗಡದ ಮೀಸಲಾತಿ ಶೇ 7ರಷ್ಟು ಹೆಚ್ಚಳ ಮಾಡಿದ ನಂತರ ಹೆಚ್ಚಾಗಿರುವ ಗೊಂದಲ ನಿವಾರಿಸಬೇಕು’ ಎಂದು ಆಗ್ರಹಿಸಿದರು.
‘ಪಕ್ಷಾತೀತವಾಗಿ ಸಮಾಜದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಸಮಾಜದ ಸ್ವಾಮೀಜಿ ಮುಂದಾಳತ್ವ ವಹಿಸಿ ಹೋರಾಟ ಮಾಡಬೇಕು ಎಂದು ಒತ್ತಾಯಿಸಿ ಅಬಕಾರಿ ಇಲಾಖೆಯ ನಿವೃತ್ತ ನೌಕರ ವೆಂಕಟೇಶ ನಾಯಕ ಅಸ್ಕಿಹಾಳ ಅವರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಕಳೆದ 18 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಸಮಾಜದ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು’ ಎಂದು ಒತ್ತಾಯಿಸಿದರು.
ಸಮಾಜದ ಮುಖಂಡ ಕರಿಯಪ್ಪ ಟಿ.ಎಸ್.ಆಂಜನೇಯ, ಹನುಮೇಶ ನಾಯಕ, ವೆಂಕಟೇಶ ಉಪಸ್ಥಿತರಿದ್ದರು.