ರಾಯಚೂರು:ಅಲ್ಬೆಂಡಜೋಲ್ ಮಾತ್ರೆ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳಗಳು ನಿವಾರಣೆಯಾಗುತ್ತವೆ. ವಯಸ್ಸಿಗನುಗುಣವಾಗಿ ಅಲ್ಬೆಂಡಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಾಕಿರ ಮೊಯುದ್ದೀನ್ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಫೆಬ್ರುವರಿ 10ರಂದು ನಡೆಯುವ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮದ ಕುರಿತು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಫೆಬ್ರುವರಿ 10 ರಂದು ಇದೆ. 1 ವರ್ಷದಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯನ್ನು ಅಂಗನವಾಡಿ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತದೆ. 6 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಶಾಲಾ ಮತ್ತು ಕಾಲೇಜುಗಳಲ್ಲಿ ವಿತರಿಸಲಾಗುತ್ತದೆ. ಉಳಿದ ಮಕ್ಕಳಿಗೆ ಫೆಬ್ರುವರಿ 17 ರಂದು ಮಾತ್ರೆಗಳನ್ನು ವಿತರಿಸಲಾಗುವುದು ಎಂದರು.
ಮಕ್ಕಳು ತಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಚಿಕ್ಕದಾಗಿ ಇರಿಸಿಕೊಳ್ಳಿ. ಯಾವಾಗಲೂ ಶುದ್ಧ ನೀರನ್ನು ಕುಡಿಯಿರಿ, ಆಹಾರವನ್ನು ಮುಚ್ಚಳದಿಂದ ಮುಚ್ಚಿಡಿ, ಹಣ್ಣುಗಳು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕೈಗಳನ್ನು ವಿಶೇಷವಾಗಿ ಆಹಾರ ಸೇವಿಸುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ, ಸಾಬೂನಿಂದ ತೊಳೆದುಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬರಿಗಾಲಿನಿಂದ ನಡೆದಾಡದೇ ಚಪ್ಪಲಿಗಳನ್ನು ಧರಿಸಿ ಹಾಗೂ ಬಯಲಿನಲ್ಲಿ ಮಲ ವಿಸರ್ಜನೆ ಮಾಡಬೇಡಿ. ಶೌಚಾಲಯವನ್ನು ಬಳಸಬೇಕಾಗುತ್ತದೆ ಎಂದು ತಿಳಿಸಿದರು.
ಜಂತುರಹಿತ ಮಕ್ಕಳೂ ಆರೋಗ್ಯವಂತ ಮಕ್ಕಳು ಎಂಬ ಕಾರ್ಯವನ್ನು ಐ.ಸಿ.ಡಿ.ಎಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯವರು ಸಹಕರಿಸಿ ಯಶಸ್ವಿಗೊಳಿಸಬೇಕು ಎಂದರು.
ತಾಲ್ಲೂಕು ಮೇಲ್ವಿಚಾರಕ ರಂಗರಾವ್ ಕುಲಕರ್ಣಿ, ಮಲೇರಿಯಾ ಮೇಲ್ವಿಚಾರಕಿ ಸಂಧ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆವರು ಖಾಸಗಿ ಶಾಲೆಗಳ ಅಧ್ಯಕ್ಷರು, ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು ಇದ್ದರು.