ಆರ್ಯಭೋಗಾಪುರ (ಮುದಗಲ್): ಸಮೀಪದ ಆರ್ಯಭೋಗಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 21 ಜನರು ಅಸ್ವಸ್ಥರಾಗಿದ್ದಾರೆ.
‘ಕಲುಷಿತ ನೀರು ಸೇವನೆಯೇ ವಾಂತಿ–ಭೇದಿಗೆ ಕಾರಣ. ಅಸ್ವಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಬಸವ ಮನ್ನಾಪುರ ಹಾಗೂ ಚಂದ್ರಶೇಖರ ತಳವಾರ ತಿಳಿಸಿದರು.
ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿರುಪಾಕ್ಷಪ್ಪ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿದರು.
ಮದುವೆ ಊಟ ಮಾಡಿದ್ದರಿಂದ ವಾಂತಿ–ಭೇದಿ ಕಾಣಿಸಿಕೊಂಡಿದೆ ಎಂದು ರೋಗಿಗಳ ಮನೆಯವರು ಹೇಳಿದ್ದರಿಂದ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಮರಳಿದರು.
ಗ್ರಾಮದಲ್ಲಿ ಶನಿವಾರ ರೋಗ ಉಲ್ಬಣಗೊಂಡಿದ್ದರಿಂದ ವೈದ್ಯರು ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿನ ಕೊಳವೆಬಾವಿ ನೀರನ್ನು ಪರೀಕ್ಷೆಗೆ ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳಿಸಿದರು.
5 ವರ್ಷಗಳಿಂದ ಮುಚ್ಚಿದ ಕೊಳವೆಬಾವಿ ನೀರು ಸೇವಿಸಬೇಡಿ ಎಂದು ಮನವಿ ಮಾಡಿದರು.
ಕೊಳಚೆ ಪ್ರದೇಶದಲ್ಲಿ ಬ್ಲೀಚಿಂಗ್ ಸಿಂಪಡಿಸಿದ್ದೇವೆ ಎಂದು ವೈದ್ಯ ಡಾ.ವಿರುಪಾಕ್ಷಪ್ಪ ತಿಳಿಸಿದರು.
‘ಆರ್ಯಭೋಗಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.
ಹೂನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದರು.