ರಾಮನಗರ: ಜಿಲ್ಲೆಯ ಆರು ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಆರಂಭಗೊಂಡಿತು.
ರಾಮನಗರದ ಬೇತೆಲ್ ಶಿಕ್ಷಣ ಸಂಸ್ಥೆಯಲ್ಲಿ ಎರಡು, ಶಾಂತಿ ನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಎರಡು ಹಾಗೂ ಬಿಎಸ್ವಿಪಿ ಶಿಕ್ಷಣ ಸಂಸ್ಥೆ ಮತ್ತು ಐಜೂರು ಸರ್ಕಾರಿ ಪ್ರೌಢಶಾಲೆಯಲ್ಲಿ ತಲಾ ಒಂದು ಕೇಂದ್ರವನ್ನು ತೆರೆಯಲಾಗಿದೆ. ಮೊದಲ ದಿನದಂದು 1008 ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
"ಪ್ರತಿ ಕೇಂದ್ರವನ್ನು ಸ್ಯಾನಿಟೈಜ್ ಮಾಡಲಾಗಿದ್ದು, ಮೌಲ್ಯಮಾಪನಕ್ಕೆ ಬರುವ ಪ್ರತಿ ಶಿಕ್ಷಕರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳಗೆ ಬಿಡಲಾಗುತ್ತಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಬರುತ್ತಿದ್ದಾರೆ. ಶಿಕ್ಷಕರೇ ತಮ್ಮ ಊಟೋಪಚಾರ ನೋಡಿಕೊಳ್ಳುತ್ತಿದ್ದಾರೆ’ ಎಂದು ಡಿಡಿಪಿಐ ಸೋಮಶೇಖರಯ್ಯ ತಿಳಿಸಿದರು.
"ಏಳು ದಿನಗಳಲ್ಲಿ ಮೌಲ್ಯಮಾಪನ ಮುಗಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಬೆಂಗಳೂರು ಲಾಕ್ಡೌನ್ ಆಗಿ ಬರುವ ಶಿಕ್ಷಕರ ಸಂಖ್ಯೆ ಕಡಿಮೆ ಆದಲ್ಲಿ ಇನ್ನೂ ಒಂದೆರಡು ದಿನ ಹೆಚ್ಚುವರಿಯಾಗಿ ನಡೆಯಬಹುದು’ ಎಂದು ಅವರು ತಿಳಿಸಿದರು.