ಕನಕಪುರ: ಕುವೆಂಪು ಅವರಲ್ಲಿ ಮಾನವೀಯತೆ ಮೀರಿದ ಗುಣಗಳಿದ್ದರಿಂದಲೇ ವಿಶ್ವಕ್ಕೆ ಮಾನವತೆಯ ಸಂದೇಶವನ್ನು ಸಾರಿ ವಿಶ್ವಮಾನವ ಎನಿಸಿಕೊಂಡರು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮಿ ಹೇಳಿದರು.
ಇಲ್ಲಿನ ಪೈಪ್ಲೈನ್ ಕನಕ-ಕಾವೇರಿ ಉದ್ಯಾನದ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕುವೆಂಪು ಜನ್ಮಾಚರಣೆ ಕುರಿತು ಕುವೆಂಪು ರಚಿತ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರು ಪ್ರಕೃತಿ ಸಂಪತ್ತಿನ ಸೌಂದರ್ಯದ ಮಲೆನಾಡಿನ ಸಣ್ಣ ಹಳ್ಳಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಸಾಹಿತ್ಯದ ಮೂಲಕ ಅಸಾಮಾನ್ಯರಾಗಿ ಬೆಳೆದವರು. ಅವರು ಈ ನಾಡಿಗೆ ಕೊಟ್ಟ ಕೊಡುಗೆ ಸಾಮಾನ್ಯವಾದುದಲ್ಲ ಎಂದು ತಿಳಿಸಿದರು.
ಮರಳೇಗವಿ ಮಠದ ಮುಮ್ಮಡಿ ಶಿವರುದ್ರಸ್ವಾಮಿ ಆಶೀರ್ವಚನ ನೀಡಿ, ಕುವೆಂಪು ಅವರದ್ದು ಮೇರು ವ್ಯಕ್ತಿತ್ವ, ಆ ವ್ಯಕ್ತಿತ್ವದಿಂದಲೇ ನಾಡಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದಾರೆ. ಅವರನ್ನು ಕುರಿತು ನಡೆಸಿರುವ ಗೀತಾಗಾಯನ ಮೂಲಕ ಇಂದಿನ ಯುವ ಪೀಳಿಗೆಗೆ ಕುವೆಂಪು ಅವರ ಬಗ್ಗೆ ತಿಳಿಸಿಕೊಡುವ ಕೆಲಸವಾಗುತ್ತಿದೆ ಎಂದರು.
ದೇಗುಲಮಠದ ಚನ್ನಬಸವ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕಾಂಗ್ರೆಸ್ ಹಿರಿಯ ಮುಖಂಡ ಎಂ.ಮಂಜುನಾಥ್, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ, ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಮಾರೇಗೌಡ, ಬಾಬು, ಪ್ರಸನ್ನ, ಭದ್ರೇಶ್, ಗುರುಗೌಡ, ಜನನಿ ಟ್ರಸ್ಟ್ ಅಧ್ಯಕ್ಷ ದೇವರಾಜು ಉಪಸ್ಥಿತರಿದ್ದರು.
ನಗರಸಭೆ ನೂತನ ಸದಸ್ಯರಾದ ಎನ್. ಮೋಹನ್, ಸ್ಟುಡಿಯೋ ಚಂದ್ರು, ವಿಜಯಕುಮಾರ್, ಸುನಿತ, ಪದ್ಮಮ್ಮ, ಗುಂಡಣ್ಣ, ರಾಮ್ದಾಸ್, ಮಹಮ್ಮದ್ ಮುಕ್ಬುಲ್, ಸೈಯದ್ ಸಾದಿಕ್, ಪಿಎಚ್ಡಿ ಪಡೆದ ನಾಗೇಂದ್ರ ಅವರನ್ನು ಅಭಿನಂಧಿಸಲಾಯಿತು.
ತಾಲ್ಲೂಕು ಮಟ್ಟದ ಕುವೆಂಪು ವಿರಚಿತ ಭಾವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ರಾಧಿಕಬಾಯಿ, ದ್ವಿತೀಯ ಸ್ಥಾನ ಕೆ.ಹೇಮಶ್ರೀ, ತೃತೀಯ ಸ್ಥಾನ ವಿದ್ಯಾ.ಜಿ, ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಸೋನಾ.ಜಿ. ಮತ್ತು ತೇಜಸ್ವಿನಿ ಬಿ.ಆರ್ ಅವರಿಗೆ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.