ರಾಮನಗರ: ಕೋವಿಡ್ ಎರಡನೇ ಅಲೆಯು ಖಾಸಗಿ ಶಾಲೆಗಳ ಶಿಕ್ಷಕರನ್ನು ಸಂಕಷ್ಟಕ್ಕೆ ದೂಡಿದೆ. ಅಂತಹವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ನಗರದ ಗುರುಭವನದಲ್ಲಿ ಶನಿವಾರ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕ ಪಾವತಿಯಾಗದ ಕಾರಣ ಶಿಕ್ಷಕರು ಸಂಕಷ್ಟದಲ್ಲಿ ಇದ್ದಾರೆ. ಈ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ವೇತನ ಸಿಗದೆ ಜೀವನ ನಡೆಸಲು ಪರದಾಡುತ್ತಿರುವ ಬಗ್ಗೆ ತಮ್ಮ ಪಕ್ಷಕ್ಕೆ ಅರಿವಿದೆ. ಈ ಬಗ್ಗೆ ಡಿಡಿಪಿಐ ಅವರಿಗೆ ಕರೆ ಮಾಡಿ ತೀರಾ ಅಗತ್ಯವಿರುವ ಸಿಬ್ಬಂದಿಗೆ ಕನಿಷ್ಠ ಶೇ 50ರಷ್ಟು ವೇತನ ಕೊಡಿಸಿ ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಖಾಸಗಿ ಶಾಲೆಗಳ ಶಿಕ್ಷಕರಿಗೆ ಈವರೆಗೂ ಪ್ಯಾಕೇಜ್ ಘೋಷಣೆಯಾಗಿರಲಿಲ್ಲ. ಹೀಗಾಗಿ ತಾವು ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬಂದಿರುವ ಪರಿಷತ್ ಸದಸ್ಯರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿ ಶಿಕ್ಷಕರನ್ನು ಭಿಕ್ಷುಕರನ್ನಾಗಿ ಮಾಡಬೇಡಿ ಎಂದು ಆಗ್ರಹಿಸಿದ್ದೆವು. ತದನಂತರ ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸ್ಪಂದಿಸಲು ಉದ್ದೇಶಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಹುಸೇನ್, ಕೆ. ರಾಜು, ಕೆ. ಶೇಷಾದ್ರಿ, ಚೇನತ್ಕುಮಾರ್, ರಮೇಶ್ ಇದ್ದರು.