ರಾಮನಗರ: ನಗರದ ಅಗ್ರಹಾರದಲ್ಲಿರುವ ವ್ಯಾಸರಾಯರ ರಸ್ತೆಯಲ್ಲಿ ಸುಮಾರು ₹3 ಕೋಟಿ ವೆಚ್ಚದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ನಗರಸಭೆ ಸದಸ್ಯ ಹಾಗೂ ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿ ಟ್ರಸ್ಟ್ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹಾಗೂ ಪದಾಧಿಕಾರಿಗಳು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶೇಷಾದ್ರಿ, ‘ಭಕ್ತರ ಬಹುದಿನಗಳ ಕನಸಿನಂತೆ ನಗರದಲ್ಲಿ ದೇವಾಲಯ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ದೇವಾಲಯಕ್ಕೆ ಅಯ್ಯಪ್ಪ ಭಕ್ತರು ತನು, ಮನ ಹಾಗೂ ಧನ ಅರ್ಪಿಸಿ ಸಹಕರಿಸಬೇಕು’ ಎಂದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆರ್.ಜೆ. ಕುಮಾರಸ್ವಾಮಿ, ‘ನಗರದ ಅರ್ಕೇಶ್ವರ ಸ್ವಾಮಿ ದೇವಾಲಯದ ಕಟ್ಟಡ ನಿರ್ಮಾಣ ಶಿಲ್ಪಿ ಕಾರ್ಕಳದ ಚಂದ್ರಶೇಖರ್ ಅವರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೂ ನೀಲನಕ್ಷೆ ತಯಾರಿಸಿ ಕೊಟ್ಟಿದ್ದಾರೆ. 12 ಸಾವಿರ ಚದರ ಅಡಿಯಲ್ಲಿ ದೇವಾಲಯ ನಿರ್ಮಾಣವಾಗಲಿದೆ. ಶಬರಿಮಲೆ ದೇವಾಲಯದ ಪ್ರತಿರೂಪವಾಗಿ ರಾಮನಗರದಲ್ಲಿಯೂ ದೇವಾಲಯ ನಿರ್ಮಾಣವಾಗಲಿದೆ’ ಎಂದು ಹೇಳಿದರು.
‘ಭಕ್ತರ ವಾಹನಗಳ ಪಾರ್ಕಿಂಗ್ ಸೌಲಭ್ಯ, ದೇವಾಲಯದ ಅರ್ಚಕರು ಉಳಿದುಕೊಳ್ಳಲು ಕೊಠಡಿ ಸೇರಿದಂತೆ ವಿವಿಧ ಅಗತ್ಯ ಮೂಲ ಸೌಕರ್ಯಗಳೊಂದಿಗೆ ದೇವಾಲಯ ತಲೆ ಎತ್ತಲಿದೆ’ ಎಂದು ತಿಳಿಸಿದರು.
ಟ್ರಸ್ಟ್ನ ಕಾರ್ಯಾಕಾರಿ ಅಧ್ಯಕ್ಷ ಪಿ.ವಿ. ಪ್ರಭಾಕರ ಶೆಟ್ಟಿ, ನಿರ್ದೇಶಕರಾದ ಪ್ರದೀಪ್, ಪಿ.ವಿ. ಬದರಿನಾಥ್, ಕೃಷ್ಣಪ್ಪ (ಸ್ಟೀಲ್), ಸಿ.ಎಸ್. ಮಹೇಶ್, ಕಿಟ್ಟಪ್ಪ ಹಾಗೂ ಇತರರು ಇದ್ದರು.