ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷೋತ್ಪಾದನೆ ವಿರುದ್ಧ ಮೌಲ್ಯೋತ್ಪಾದನೆ ಅಗತ್ಯ: ಅರುಣ್ ಕವಣಾಪುರ

ಹಿಂದಿ ಅನುವಾದಿತ ಕೃತಿ ‘ವ್ಯಾಘ್ರವೇಷಿ‘ ಬಿಡುಗಡೆಯಲ್ಲಿ ಕವಿ ಅರುಣ್ ಅಭಿಪ್ರಾಯ
Published 27 ಮೇ 2024, 6:16 IST
Last Updated 27 ಮೇ 2024, 6:16 IST
ಅಕ್ಷರ ಗಾತ್ರ

ರಾಮನಗರ: ‘ಸಮಾಜದಲ್ಲಿ ಇತ್ತೀಚೆಗೆ ದ್ವೇಷೋತ್ಪಾದನೆ ಮತ್ತು ಭಯೋತ್ಪಾದನೆ ಹೆಚ್ಚಾಗಿದೆ. ಇವುಗಳ ನಡುವೆ ಮೌಲ್ಯೋತ್ಪಾದನೆಯನ್ನು ಹೆಚ್ಚಿಸಿ ಸಮಾಜದ ಚಿತ್ತವನ್ನು ಕಾಪಾಡಬೇಕಾದ ತುರ್ತು ಎದುರಾಗಿದೆ. ಭಯ ಮತ್ತು ದ್ವೇಷವಿಲ್ಲದ ಸಾಮರಸ್ಯದ ಬದುಕು ನಮ್ಮದಾಗಬೇಕಿದೆ’ ಎಂದು ಕವಿ ಅರುಣ್ ಕವಣಾಪುರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾನುವಾರ ಪರಿಷತ್ತು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಎಂ. ಬೈರೇಗೌಡ ಅವರ‌ ‘ವೇಷದ ಹುಲಿ’ ನಾಟಕದ ಹಿಂದಿ ಅನುವಾದಿತ ‘ವ್ಯಾಘ್ರವೇಷಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದ್ವೇಷದ ಕಾರಣಕ್ಕಾಗಿ ಒಬ್ಬರನ್ನೊಬ್ಬರು ಕೊಲ್ಲುತ್ತಾ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇವೆರಡನ್ನೂ ಗೆಲ್ಲುವ ಪ್ರೀತಿಯ ಪರಿಮಳ ಹೆಚ್ಚು ಪಸರಿಸಬೇಕಿದೆ. ಜಗತ್ತನ್ನು ಗೆಲ್ಲುವ ಅತಿ ದೊಡ್ಡ ಆಯುಧ ಯಾವುದಾದರು ಇದ್ದರೆ ಅದು ಪ್ರೀತಿ ಮಾತ್ರ. ಬುದ್ಧನ ಅಂತಃಕರಣ ಮತ್ತು ಗಾಂಧೀಜಿಯ ಅಹಿಂಸಾ ತತ್ವದಲ್ಲಿ ಪ್ರೀತಿ ಅಂತರ್ಗತವಾಗಿತ್ತು. ಅದಕ್ಕಾಗಿಯೇ ಅವರು ಮಹಾನ್ ವ್ಯಕ್ತಿಗಳಾದರು. ವೇಷದ ಹುಲಿ ಕೃತಿಯಲ್ಲೂ ಅಂತಹ ಸಾಮರಸ್ಯದ ಪ್ರೀತಿ ಹಾಸು ಹೊಕ್ಕಾಗಿದೆ’ ಎಂದು ನುಡಿದರು.

‘ಜಾನಪದ ಮತ್ತು ಇತಿಹಾಸವು ಮೇಳೈಸಿರುವ ಕೃತಿಯಲ್ಲಿ ಪ್ರಭುತ್ವ, ಪ್ರಜಾಪ್ರಭುತ್ವ ಹಾಗೂ ಸ್ತ್ರೀವಾದದ ನೆಲೆಗಟ್ಟಿನ ಎಳೆಗಳಿವೆ. ವೇಷದ ಹುಲಿ ಯಾರು ಎಂಬ ಕುತೂಹಲದೊಂದಿಗೆ ಓದುತ್ತಾ ಹೋದಾಗ ನಮ್ಮೊಳಗಿರುವ ಕಪಟ, ಕ್ರೌರ್ಯ, ದ್ವೇಷಾಸೂಯೆ ಗುಣಗಳೇ ಇಲ್ಲಿನ ವೇಷದ ಹುಲಿಯಾಗಿರುವುದು ಗೋಚರಿಸುತ್ತದೆ’ ಎಂದು ಹೇಳಿದರು.

ಮೂಲ ಕೃತಿಕಾರ ಡಾ. ಎಂ. ಬೈರೇಗೌಡ, ‘ಸಾಹಿತಿಯೊಬ್ಬ ತನ್ನ ಅಸ್ತಿತ್ವ ಗುರುತಿಸಿಕೊಳ್ಳುವಲ್ಲಿ ಒಂದು ಭಾಷೆಯು ಮತ್ತೊಂದು ಭಾಷೆಯೊಂದಿಗೆ ಸೇತುವಾಗಿ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ವರ್ಷಗಳ ಹಿಂದೆಯೇ ಹಲವು ಪ್ರದರ್ಶನಗಳನ್ನು ಕಂಡಿದ್ದ ‘ವೇಷದ ಹುಲಿ’ ನಾಟಕವು ಪುಸ್ತಕ ರೂಪ ತಳೆದು, ಇದೀಗ ಹಿಂದಿಗೆ ಅನುವಾದಗೊಂಡಿರುವುದು ಸಂತಸ ತಂದಿದೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್ ಕೃತಿಗಳನ್ನು ಬಿಡುಗಡೆಗೊಳಿಸಿದರು. ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಅಧ್ಯಕ್ಷತೆ ವಹಿಸಿದ್ದರು. ನವೀನ್ ನಿರೂಪಣೆ ಮಾಡಿದರು.

ಅನುವಾದದಿಂದ ಯಾವುದೇ ಭಾಷೆಯ ಸಾಹಿತ್ಯ ಲೋಕ ಸಾಹಿತ್ಯವಾಗುತ್ತಾ ಹೋಗುತ್ತದೆ. ಒಂದು ನೆಲದ‌ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತೊಂದು ನೆಲದವರಿಗೆ ಪರಿಚಯಿಸುವಲ್ಲಿ ಅನುವಾದ ಮಹತ್ವದ ಪಾತ್ರ ವಹಿಸುತ್ತದೆ
– ಡಾ. ಎನ್. ದೇವರಾಜ್ ‘ವ್ಯಾಘ್ರವೇಷಿ’ ಕೃತಿ ಅನುವಾದಕ
‘ಶಾಲಾ–ಕಾಲೇಜುಗಳಲ್ಲಿ ಪ್ರದರ್ಶನ ಕಾಣಲಿ’
‘ಜಾನಪದ ಕಥನದ ಎಳೆಯನ್ನು ಆಧುನಿಕತೆಗೆ ಒಗ್ಗಿಸಿ ಮೂಲ ಸೊಗಡಿಗೆ ಧಕ್ಕೆಯಾಗದಂತೆ ಅದಕ್ಕಿರುವ ಸಕಾಲಿಕತೆಯ ಮಹತ್ವವವನ್ನು ಬೈರೇಗೌಡರು ತಮ್ಮ ನಾಟಕದಲ್ಲಿ ಹೇಳಿದ್ದಾರೆ. ಈ‌ ಪುಸ್ತಕವು ಹಿಂದಿ ಬೋಧಕರ ಕೈಗೆ ತಲುಪಿ ಶಾಲಾ- ಕಾಲೇಜುಗಳಲ್ಲಿ ಪ್ರದರ್ಶನವಾಗಬೇಕು. ಆ ಕಾರ್ಯಕ್ಕೆ ನಾನು‌ ಸಹ ಕೈ ಜೋಡಿಸುವೆ’ ಎಂದು ಅನುವಾದಿತ ಕೃತಿ ಕುರಿತು ಮಾತನಾಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಡೀನ್ ಡಾ. ಮೈಥಿಲಿ ಪಿ. ರಾವ್ ಅಭಿಪ್ರಾಯಪಟ್ಟರು. ‘ಹಿಂದಿ ಮತ್ತು ಕನ್ನಡ ಭಾಷೆಯ ವ್ಯಾಕರಣದಲ್ಲಿ ಸಾಮ್ಯತೆ ಇದೆ. ಆದರೆ ಜಾನಪದ ಸಾಹಿತ್ಯ ಅನುವಾದ ಮಾಡುವಾಗ ವ್ಯತ್ಯಾಸ ಕಾಣುತ್ತೇವೆ. ಅದೆಲ್ಲವನ್ನೂ ಡಾ. ಎನ್. ದೇವರಾಜ್ ಅವರು ಅಳೆದು ತೂಗಿ ಕೃತಿಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ‌ ಹಿಂದಿಗೆ ಅ‌ನುವಾದಿಸಿದ್ದಾರೆ. ಸಮಾಜದಲ್ಲಿ ನಕಾರಾತ್ಮಕ ಅಂಶಗಳಷ್ಟೇ ಸಕಾರಾತ್ಮಕ ಅಂಶಗಳಿವೆ. ಈ ಅಂಶಗಳಿಗೆ ಒತ್ತು ನೀಡುತ್ತಾ ಸಮಾಜದ ಸ್ವಾಸ್ಥ್ಯ ಕಾಯುವ ಜವಾಬ್ದಾರಿ ಕೃತಿಕಾರನ ಮೇಲಿದ್ದು ಬೈರೇಗೌಡರು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT