ರಾಮನಗರ: ರಾಜ್ಯ ಸರ್ಕಾರವು ಕೋವಿಡ್ಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಖರೀದಿ ನೆಪದಲ್ಲಿ ₹2200 ಕೋಟಿ ಅವ್ಯವಹಾರ ನಡೆಸಿದೆ ಎಂಬ ಆರೋಪಗಳಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
'ವೈದ್ಯಕೀಯ ಸುರಕ್ಷಾ ಸಾಮಗ್ರಿಗಳಾದ ಪಿಪಿಇ ಕಿಟ್, ವೆಂಟಿಲೇಟರ್, ಮುಖಗವಸು, ಸರ್ಜಿಕಲ್ ಕೈಗವಸು, ಆಮ್ಲಜನಕ ಸಿಲಿಂಡರ್, ಕೋವಿಡ್ ಪರೀಕ್ಷೆ, ಸೋಂಕಿತರ ದೈನಂದಿನ ಖರ್ಚು ಹಾಗೂ ಇನ್ನಿತರ ಪರಿಕರಗಳು ಸೇರಿದಂತೆ ಸರ್ಕಾರವು ಒಟ್ಟಾರೆ ಸುಮಾರು ₹1163 ಕೋಟಿ ವೆಚ್ಚ ಮಾಡಿದೆ. ಆದರೆ ₹3392 ಕೋಟಿ ಲೆಕ್ಕ ತೋರಿಸುತ್ತಿದೆ. ಸರ್ಕಾರಕ್ಕೆ ನೈತಿಕತೆ ಇದ್ದಲ್ಲಿ ಕೂಡಲೇ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
'ಕಳೆದ 23 ದಿನದಿಂದ ಇಂಧನ ದರ ನಿರಂತರ ಏರಿಕೆ ಕಾಣುತ್ತಿದೆ. ಈ ಅವಧಿಯಲ್ಲಿ ಪ್ರತಿ ಲೀಟರ್ಗೆ ಡೀಸೆಲ್ ₹8.30 ಹಾಗೂ ಪೆಟ್ರೋಲ್ ₹9.46 ಅಷ್ಟು ಏರಿಕೆ ಕಂಡಿದೆ. ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 50 ಡಾಲರ್ ಒಳಗಿದೆ. ಇಷ್ಟೆಲ್ಲಾ ಕಡಿಮೆ ಬೆಲೆ ಇದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಏರಿಕೆ ಮಾಡುತ್ತಿದೆ ಎಂದು ದೂರಿದರು.
ರೈಲ್ವೆ ಮತ್ತು ವಿದ್ಯುತ್ ಇಲಾಖೆಯನ್ನು ಖಾಸಗಿ ಒಡೆತನಕ್ಕೆ ನೀಡಲು ಸರ್ಕಾರ ಹೊರಟಿರುವುದು ಅಕ್ಷಮ್ಯ. ಇದರಿಂದಾಗಿ ಬಿಎಸ್ಎನ್ಎಲ್ಗೆ ಆದ ಸ್ಥಿತಿಯೇ ಇದಕ್ಕೂ ಆಗಲಿದೆ. ಇದನ್ನು ಬಿಎಸ್ಪಿ ಖಂಡಿಸಲಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಬಿ.ಅನ್ನದಾನಪ್ಪ, ಎಂ.ನಾಗೇಶ್, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೃಷ್ಣಪ್ಪ, ಜಿಲ್ಲಾ ಸಂಯೋಜಕ ನೀಲಿ ರಮೇಶ್, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹೀಂ, ದೇವರಾಜು, ಕಾರ್ಯದರ್ಶಿ ವೆಂಕಟಾಚಲ, ಪದಾಧಿಕಾರಿಗಳಾದ ಮುರುಗೇಶ್, ಬಾನಂದೂರು ಕುಮಾರ್, ಸಿದ್ದರಾಜು ಉಪಸ್ಥಿತರಿದ್ದರು.