ಕುದೂರು: ಪಟ್ಟಣದ ತುಮಕೂರು ರಸ್ತೆಯ ರಾಮಲಿಂಗ ಚೌಡೇಶ್ವರಿ 18ನೇ ವಾರ್ಷಿಕೋತ್ಸವ ಮತ್ತು ಮಹಾ ರಥೋತ್ಸವದ ಪೂಜಾ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಫೆ. 23 ಮತ್ತು 24ರಂದು ಗಂಗೆ ಪೂಜೆ, ಅಲಗು ಸೇವೆ, ಪಂಚಾಮೃತ ಅಭಿಷೇಕ, ನವಗ್ರಹ ಹೋಮ ಗಣ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಲಲಿತಾಂಬಿಕಾ ಭಕ್ತ ವೃಂದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆದವು.
ಶನಿವಾರ ಸಂಜೆ ಮಂಗಳ ವಾದ್ಯಗಳೊಂದಿಗೆ ರಥವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಸಂಜೆ ದೇವಸ್ಥಾನದಲ್ಲಿ ಉಯ್ಯಾಲೆ ಸೇವೆ ನಡೆಯಿತು.
ದೇವಾಂಗ ಸಂಘದಿಂದ ಭಕ್ತರಿಗೆ ಮಜ್ಜಿಗೆ, ಕೋಸಂಬರಿ, ಪಾನಕ ವಿತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು. ಕುದೂರು, ಮಾಗಡಿ, ಕುಣಿಗಲ್, ತುಮಕೂರು, ನೆಲಮಂಗಲ, ಬೆಂಗಳೂರು ಕಡೆಗಳಿಂದ ನೂರಾರು ಭಕ್ತರು ದೇವರ ದರ್ಶನ ಪಡೆದರು.
ಅರ್ಚಕ ಶಿವರಾಮ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಬಿ. ಬಾಲರಾಜು, ಉಪಾಧ್ಯಕ್ಷ ಕೃಷ್ಣಪ್ಪ, ಜಯಚಂದ್ರ ಬಾಬು, ಪುಟ್ಟರಂಗಪ್ಪ, ಲಕ್ಷ್ಮೀನಾರಾಯಣ, ಮುನಿರಂಗಪ್ಪ, ಗೋವಿಂದರಾಜು, ಶೇಖರ್, ವಿನಯ್, ನಾಗೇಶ್, ಮುರುಳೀಧರ್, ಮಂಜುನಾಥ್, ಕೃಷ್ಣಮೂರ್ತಿ, ರಂಗನಾಥ್ ಹಾಜರಿದ್ದರು.